ದಡಾರ-ರುಬೆಲ್ಲಾ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ
ಮೈಸೂರು, ಫೆಬ್ರವರಿ 7 : ಇಲ್ಲಿನ ನಜರ್ ಬಾದಿನ ಎನ್ ಪಿಸಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು.
ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಧಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.[ಮೈಸೂರಿನಲ್ಲಿ ಫೆ.7-28ರವರೆಗೆ ದಡಾರ-ರುಬೆಲ್ಲಾ ಲಸಿಕೆ]
ದಡಾರ ಮತ್ತು ರುಬೆಲ್ಲಾ( ಮೈಮೇಲೆ ಕೆಂಪು ದದ್ದು ಮೂಡುವ ರೋಗ) ಕಾಯಿಲೆ ಬರದಂತೆ ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ ಲಸಿಕೆ ಹಾಕಲಾಗುತ್ತಿದ್ದು ಜ.5ರಂದು ಚಾಲನೆ ನೀಡಲಾಗಿದೆ. ಇಂದು ನಮ್ಮ ಮೈಸೂರಿನಲ್ಲಿಯೂ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯಾದ್ಯಂತ ಸುಮಾರು 3000 ಶಾಲೆಗಳನ್ನು ಗುರುತಿಸಲಾಗಿದ್ದು, ಅಭಿಯಾನದಲ್ಲಿ ಕೈಜೋಡಿಸಿ ಯಶಸ್ವಿಗೊಳಿಸುವಂತೆ ಪತ್ರ ಬರೆಯಲಾಗಿದೆ. ಸುಮಾರು 7000 ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಹಾಕಲಿದ್ದಾರೆ. ಜತೆಗೆ ಲಯನ್ಸ್ ಕ್ಲಬ್ ಸಹ ಅಭಿಯಾನದಲ್ಲಿ ಕೈಜೋಡಿಸಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದಲ್ಲದೆ ಅಕ್ಕಪಕ್ಕದ ಮನೆಯವರಿಗೂ ಅರಿವು ಮೂಡಿಸಬೇಕು. ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ. ಒಂದು ವೇಳೆ ಆದರೂ ಶಿಕ್ಷಕರು ಹಾಗೂ ವೈದ್ಯರಿಗೆ ಗುಣಪಡಿಸುವ ವಿಧಾನವನ್ನು ತಿಳಿಸಲಾಗಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಹಾಕಿಸಬಹುದು ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಸ್ಪತ್ರೆ ಆವರಣದಿಂದ ಆರಂಭಗೊಂಡ ಜಾಥಾ ನಜರ್ ಬಾದ್ ವೃತ್ತ, ಗೋಪಾಲಗೌಡ ಆಸ್ಪತ್ರೆ, ಚಾಮುಂಡಿವಿಹಾರ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲಿ ಸಾಗಿ ಆಸ್ಪತ್ರೆ ವರೆಗೆ ಕೊನೆಗೊಂಡಿತು.