ಜನ್ಮಾಷ್ಟಮಿಯಂದು ಕೃಷ್ಣ ಹುಟ್ಟಿದ ಸ್ಥಳದಿಂದ ಮರೀಗೌಡ ಹೊರಕ್ಕೆ
ಮೈಸೂರು, ಆಗಸ್ಟ್, 25: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಶರಣಾಗಿದ್ದ ಸಿಎಂ ಸಿದ್ದರಾಮಯ್ಯ ಆಪ್ತ ಮರೀಗೌಡ ಅವರಿಗೆ ಗುರುವಾರ ಜಾಮೀನು ಸಿಕ್ಕಿದೆ.
ಕೃಷ್ಣ ಹುಟ್ಟಿದ ಸ್ಥಳದಿಂದ ಮರೀಗೌಡ ಕೃಷ್ಣಜನ್ಮಾಷ್ಟಮಿಯಂದೇ ಹೊರಕ್ಕೆ ಬರುವ ಅವಕಾಶ ಸಿಕ್ಕಿದೆ. ಮೈಸೂರಿನ 7ನೇ ಜಿಲ್ಲಾ ಸತ್ರ ನ್ಯಾಯಾಲಯ ಮರೀಗೌಡಗೆ ಗುರುವಾರ ಜಾಮೀನು ನೀಡಿದೆ. ಐಎಎಸ್ ಅಧಿಕಾರಿ ಶಿಖಾ ನಜರಬಾದ್ ಠಾಣೆಗೆ ಮರೀಗೌಡ ವಿರುದ್ಧ ದೂರು ಸಲ್ಲಿಸಿದ್ದರು.[ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಅಂತೂ ಪ್ರಕರಣ ಒಂದಿಷ್ಟು ತಣ್ಣಗಾದ ಮೇಲೆ ಮರೀಗೌಡರಿಗೆ ಜಾಮೀನು ಸಿಕ್ಕಂತೆ ಆಗಿದೆ. ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಪೊಲೀಸರಿಗೆ ಶರಣಾಗಿದ್ದರು.
ಯಾವ ಪ್ರಕರಣ?
ಜುಲೈ 3ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದರು. ಶಿಷ್ಟಾಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡಿದ್ದರು. ಆಗ ಅಲ್ಲಿಗೆ ಆಗಮಿಸಿದ್ದ ಡಿಸಿಯಾಗಿದ್ದ ಸಿ.ಸಿಖಾ ಅವರನ್ನು ಮರೀಗೌಡ ಏಕವಚನದಲ್ಲಿ ನಿಂದಿಸಿದ್ದರು.
ದೂರು ದಾಖಲು
ಕೆಲಸಕ್ಕೆ ಅಡ್ಡಿ ಮತ್ತು ಬೆದರಿಕೆ ಹಾಕಿದ ಆರೋಪದಡಿ ಶಿಖಾ ಮರೀಗೌಡ ಅವರ ಮೇಲೆ ನಜರಬಾದ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಮರೀಗೌಡ ನಾಪತ್ತೆ
ದೂರು ದಾಖಲಾಗುತ್ತಿದ್ದಂತೆ ಮರೀಗೌಡ ನಾಪತ್ತೆಯಾಗಿದ್ದರು. ನಿರೀಕ್ಷಣಾ ಜಾಮೀನಿಗಾಗಿ ಮೈಸೂರು ನ್ಯಾಯಾಲಯ ಮತ್ತು ಹೈಕೋರ್ಟ್ ಗೂ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ನ್ಯಾಯಾಲಯ ಮರೀಗೌಡ ಅರ್ಜಿಯನ್ನು ವಜಾ ಮಾಡಿತ್ತು.
ಶರಣಾದ ಮರೀಗೌಡ
ನಿರೀಕ್ಷಣಾ ಜಾಮೀನು ಸಿಗದ ಕಾರಣ ಮರೀಗೌಡ ಆಗಸ್ಟ್ 3ರಂದು ಮೈಸೂರು ಪೊಲೀಸರಿಗೆ ಶರಣಾಗಿದ್ದರು. ಇದಾದ ಮೇಲೆ ಮರೀಗೌಡ ಅಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.
ಕಾಂಗ್ರೆಸ್ ನಿಂದ ಅಮಾನತು
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಮರೀಗೌಡ ಅವರನ್ನು ಕಾಂಗ್ರೆಸ್ ನಿಂದ ಆಗಸ್ಟ್ 9 ರಂದು ಅಮಾನತು ಮಾಡಲಾಗಿತ್ತು.
ಶಿಖಾ ವರ್ಗಾವಣೆ
ಮರೀಗೌಡ ಶರಣಾಗತಿ ನಂತರ (ಆಗಸ್ಟ್ 10) ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ಅವರನ್ನು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಿತ್ತು.