ಮರೀಗೌಡ ಜಾಮೀನು ಅರ್ಜಿ, ತನಿಖಾಧಿಕಾರಿ ಹಾಜರಿಗೆ ಸೂಚನೆ
ಮೈಸೂರು, ಆಗಸ್ಟ್ 16 : ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಆ.17ಕ್ಕೆ ಮುಂದೂಡಿದೆ. ನ್ಯಾಯಾಲಯದ ಮುಂದೆ ತನಿಖಾಧಿಕಾರಿ ಎಸಿಪಿ ರಾಜಶೇಖರ್ ಖುದ್ದಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ಅವರು ಆಗಸ್ಟ್ 3ರಂದು ನಜಾರಾಬಾದ್ ಪೊಲೀಸರ ಮುಂದೆ ಶರಣಾಗಿದ್ದರು. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.[ಜಿಲ್ಲಾಧಿಕಾರಿಗೆ ಧಮ್ಕಿ : ಕಾಂಗ್ರೆಸ್ ನಿಂದ ಕೆ.ಮರೀಗೌಡ ಅಮಾನತು]
ಮಂಗಳವಾರ ಮರೀಗೌಡ ಪರ ವಕೀಲ ಸಿ.ಎಂ.ಜಗದೀಶ್ ಅವರು 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಆರೋಪಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಲಾಯಿತು. ಆದ್ದರಿಂದ, ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.
ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ತನಿಖೆಯನ್ನು ಎಸಿಪಿ ರಾಜಶೇಖರ್ ಅವರು ನಡೆಸುತ್ತಿದ್ದಾರೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ತನಿಖಾಧಿಖಾರಿ ಖುದ್ದಾಗಿ ಕೋರ್ಟ್ಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿತು.[ಕೆ.ಮರೀಗೌಡ ಜಾಮೀನು ಅರ್ಜಿ ವಜಾ, ಜೈಲೇ ಗತಿ]
ಕಾಂಗ್ರೆಸ್ನಿಂದ ಅಮಾನತು : ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಆಗಸ್ಟ್ 3ರಿಂದ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಅವರು ಜಾಮೀನಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಸಿ.ಶಿಖಾ ವರ್ಗಾವಣೆ : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರನ್ನು ಕಳೆದ ವಾರ ವರ್ಗಾವಣೆ ಮಾಡಲಾಗಿದೆ. ಸಿ.ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.