ಮೈಸೂರು : ಮಗಳ ಫೀಸ್ ಕಟ್ಟಲಾಗದೆ ತಂದೆ ಆತ್ಮಹತ್ಯೆ
ಮೈಸೂರು, ಜೂನ್ 22 : ಮಗಳ ಫೀಸ್ ಕಟ್ಟಲು ಸಾಧ್ಯವಾಗಿಲ್ಲವೆಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನ ಮೆಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಜೂನ್ 22) ನಡೆದಿದೆ.
ಬಿಎಸ್ಸಿ ಓದುತ್ತಿದ್ದ ಮಗಳ ಕಾಲೇಜಿನ ಶುಲ್ಕ ಪಾವತಿಸಲಾಗದೆ ಮನನೊಂದು ಗಂಗಾಧರ್ (51) ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಮೈಸೂರಿನ ಬೃಂದಾವನ ಬಡಾವಣೆಯ ಶ್ರೀ ಗಣಪತಿ ದೇವಾಲಯದಲ್ಲಿ ಪ್ರಸಾದ ತಯಾರಿಸುವ ಕೆಲಸ ಮಾಡುತ್ತಿದ್ದರು. ತಾವು ಪ್ರಸಾದ ತಯಾರಿಸುತ್ತಿದ್ದ ದೇವಸ್ಥಾನದ ಆವರಣದಲ್ಲಿದ್ದ ತಮ್ಮ ಮನೆಯಲ್ಲಿಯೇ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಆನಾರೋಗ್ಯದಿಂದ ಹೆಂಡತಿಯನ್ನು ಕಳೆದುಕೊಂಡಿದ್ದ ಈತ, ಒಬ್ಬಳೆ ಮಗಳ ಜೊತೆ ದೇವಸ್ಥಾನದ ಆವರಣದಲ್ಲಿ ನೀಡಲಾಗಿದ್ದ ಕೊಠಡಿಯಲ್ಲಿ ವಾಸವಿದ್ದ.
ಮಗಳು ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, 12,500 ರು. ಕಾಲೇಜು ಶುಲ್ಕ ಕಟ್ಟಲು ಇಂದೇ ಕಡೆ ದಿನವೆಂದು ಮಗಳು ಹೇಳಿದ್ದಳು. ಜೊತೆಗೆ ನಿನ್ನೆ ಅಜ್ಜಿ ಮನೆಗೆ ಹೋಗಿದ್ದ ಮಗಳು ಬೆಳಗ್ಗೆ ಬಂದು ನೋಡುವುದರಲ್ಲಿ ರಾತ್ರಿ ತಂದೆ ವೇಲ್ನಿಂದ ನೇಣಿಗೆ ಶರಣಾಗಿದ್ದ ಎನ್ನಲಾಗಿದೆ. ಈ ಸಂಬಂಧ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.