ನರಭಕ್ಷಕ ಹುಲಿಗಾಗಿ ಎಚ್ಡಿ ಕೋಟೆಯಲ್ಲಿ ಭಾರೀ ಹುಡುಕಾಟ
ಮಗ್ಗೆ ಮತ್ತು ಮಳಲಿ ಗ್ರಾಮಗಳಲ್ಲಿನ ಜಮೀನುಗಳಲ್ಲಿ ಕಳೆದ 20 ದಿನಗಳಿಂದ ಹುಲಿ ಮತ್ತು ಅದರ ಮರಿಗಳು ಕಾಣಿಸಿಕೊಳ್ಳುತ್ತಿದ್ದವು. ಇವುಗಳನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಗುರುವಾರದಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದರು.
ಎಚ್.ಡಿ. ಕೋಟೆ, ಡಿಸೆಂಬರ್ 31 : ಜಾನುವಾರುಗಳನ್ನು ತಿಂದು ಹಾಕುತ್ತಿರುವ ಮತ್ತು ಕಾರ್ಯಾಚರಣೆ ಸಂದರ್ಭ ಒಬ್ಬರನ್ನು ಬಲಿಪಡೆದು ಇಬ್ಬರನ್ನು ಗಾಯಾಳುಗಳನ್ನಾಗಿ ಮಾಡಿ, ಮಳಲಿ ಗ್ರಾಮದಲ್ಲಿ ಅಡಗಿ ಕುಳಿತಿದೆ ಎನ್ನಲಾದ ಹುಲಿಯ ಪತ್ತೆಗಾಗಿ ಶುಕ್ರವಾರ ನಡೆಸಿದ ಕಾರ್ಯಾಚರಣೆ ವಿಫಲವಾಗಿದ್ದು, ಹುಲಿಯ ಸುಳಿವು ಪತ್ತೆಯಾಗಿಲ್ಲ.
ನಾಗರಹೊಳೆ ಅಭಯಾರಣ್ಯದ ಮಗ್ಗೆ ಮತ್ತು ಮಳಲಿ ಗ್ರಾಮಗಳ ಸಮೀಪ ಜಮೀನುಗಳಲ್ಲಿ ದಸರಾ ಆನೆಗಳ ಮೂಲಕ ಹುಲಿಯ ಜಾಡನ್ನರಸಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಂಜೆ ತನಕ ಹುಡುಕಾಡಿದರೂ ಹುಲಿಯ ಸುಳಿವು ಸಿಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. [ಹುಲಿ ಕಾರ್ಯಾಚರಣೆಯಲ್ಲಿ ಗುಂಡೇಟು: ಓರ್ವ ಸಾವು, ಇಬ್ಬರಿಗೆ ಗಾಯ]
ಮಗ್ಗೆ ಮತ್ತು ಮಳಲಿ ಗ್ರಾಮಗಳಲ್ಲಿನ ಜಮೀನುಗಳಲ್ಲಿ ಕಳೆದ 20 ದಿನಗಳಿಂದ ಹುಲಿ ಮತ್ತು ಅದರ ಮರಿಗಳು ಕಾಣಿಸಿಕೊಳ್ಳುತ್ತಿದ್ದವು. ಇವುಗಳನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಗುರುವಾರದಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದರು. [ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ]
ಶುಕ್ರವಾರ ಬೆಳಗ್ಗಿನಿಂದಲೇ ಸಾಕಾನೆಗಳಾದ ಅಭಿಮನ್ಯು ಮತ್ತು ಕೃಷ್ಣರ ಜೊತೆಗೆ ವೈದ್ಯರಾದ ಉಮಾಶಂಕರ್ ಸೇರಿದಂತೆ 100ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ ನೆರವಿನಿಂದ ನಾಲ್ಕು ತಂಡಗಳನ್ನಾಗಿ ವಿಂಗಡಿಸಿ, ಗುರುವಾರ ಹುಲಿ ಪ್ರತ್ಯಕ್ಷವಾದ ಜಮೀನಿನ 500 ಮೀಟರ್ ಸುತ್ತಳತೆಯಲ್ಲಿ ಹುಡುಕಾಟ ನಡೆಸಲಾಯಿತು. [ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಶುಕ್ರವಾರ ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಕೆಲವು ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು ಹುಲಿಗಾಗಿ ಕಾಯುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಎಪಿಸಿಸಿಎಫ್ ರಂಗರಾಜನ್, ಸಿಎಫ್ ಮಣಿಕಂಠನ್, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿನಯ್, ಎಸ್ಪಿ ರವಿಚೆನ್ನಣ್ಣನವರ್, ಸಿಪಿಐ ಹರೀಶ್ ಕುಮಾರ್, ಎಸ್ಐ ಸುರೇಶ್, ಬಸವರಾಜು, ಅಶೋಕ್ ಪಾಲ್ಗೊಂಡಿದ್ದರು. [ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]
ಮೃತನ ಕುಟುಂಬಕ್ಕೆ ಪರಿಹಾರ
ಮೃತ ಮೂರ್ತಿ ಅವರ ಮನೆಗೆ ಶಾಸಕ ಎಸ್. ಚಿಕ್ಕಮಾದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ, ಅರಣ್ಯ ಇಲಾಖೆಯಿಂದ ನೀಡುವ 5 ಲಕ್ಷ ರು. ಚೆಕ್ನ್ನು ವಿತರಿಸಿದರು. ಮೃತನ ಪತ್ನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಗುಂಡೇಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಚನಹಳ್ಳಿ ಠಾಣೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.