ಮುಡುಕುತೊರೆಯಲ್ಲಿ ವೈಭವದ ಬ್ರಹ್ಮರಥೋತ್ಸವ
ಮುಡುಕುತೊರೆಯಲ್ಲಿ ನಡೆದ ಮಲ್ಲಿಕಾರ್ಜುನ ಸ್ವಾಮಿಯ ವೈಭವದ ಬ್ರಹ್ಮರಥೋತ್ಸವವನ್ನು ಭಾವ ಪರವಶರಾಗಿ ಭಕ್ತರು ಕಣ್ತುಂಬಿಕೊಂಡರು. ಉತ್ಸವ ಹೊರಟ ರಥಕ್ಕೆ ಹಣ್ಣು, ದವನ ಅರ್ಪಿಸಿ ಪ್ರಾರ್ಥಿಸಿದರು.
ಮೈಸೂರು, ಫೆಬ್ರವರಿ 6: ದಕ್ಷಿಣ ಭಾರತದ ಸೋಮಶೈಲ ಖ್ಯಾತಿಯ ಪವಿತ್ರ ಕ್ಷೇತ್ರ ಮುಡುಕುತೊರೆಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.
ಬೆಳಗ್ಗಿನಿಂದಲೇ ಜನ ಮುಡುಕುತೊರೆಯಲ್ಲಿ ಜಮಾವಣೆಗೊಂಡು ಬ್ರಹ್ಮರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಅದರಂತೆ ಮಾಘಶುದ್ಧ ದಶಮಿ ರೋಹಿಣಿ ನಕ್ಷತ್ರದ ಸೋಮವಾರ ಮಧ್ಯಾಹ್ನ ಉತ್ಸವ ಮೂರ್ತಿ ಅಲಂಕಾರಗೊಂಡಿದ್ದ ರಥದಲ್ಲಿ ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.[ಮುಡುಕುತೊರೆ ಜಾತ್ರೆಯಲ್ಲಿ ಏನೇನಿದೆ ಗೊತ್ತಾ?]
ಭಕ್ತ ಸಾಗರದ ಹರ್ಷೋದ್ಗಾರಗಳ ನಡುವೆ ವೈಭವದ ಗಾಂಭೀರ್ಯದಿಂದ ಸಾಗಿಬಂದ ರಥಕ್ಕೆ ನೆರೆದಿದ್ದ ಭಕ್ತರೆಲ್ಲರೂ ಹಣ್ಣು ದವನ ಎಸೆದು ಮನದಲ್ಲಿನ ಹರಕೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಶ್ರೀ ಗಣೇಶ ಹಾಗೂ ಶ್ರೀ ಸುಬ್ರಮಣ್ಯರ ರಥಗಳು ಸಾಗಿದ ನಂತರ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನಸ್ವಾಮಿಯ ರಥ ಸಾಗಿತು. ಪಶ್ಚಿಮಾಭಿಮುಖವಾಗಿ ಚಲಿಸಿದ ರಥ ಉತ್ತರಾಭಿಮುಖವಾಗಿ ತಿರುಗಿ ಪೂರ್ವ ದಿಕ್ಕಿನೆಡೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗಿ ಸ್ವಸ್ಥಾನಕ್ಕೆ ಮರಳಿತು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿರುವ ಶ್ರೀ ಭ್ರಮರಾಂಬಿಕಾ ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ಗಿರಿಜಾ ಕಲ್ಯಾಣದ ಪೂರ್ವಕ ಪ್ರಾಂತಃಕಾಲದಿಂದಲೇ ಶೈವ ಪುಣ್ಯಹ, ಪಂಚಾಮೃತ ಅಭಿಷೇಕ, ಏಕವಾರ ರುದ್ರ ಪಾರಾಯಣ, ಅಮ್ಮನವರಿಗೆ ದೇವಿ ಪಾರಾಯಣ, ವಿಶೇಷ ಅಲಂಕಾರ ವಿಶೇಷ ಪೂಜೆಗಳು ಜರುಗಿದವು.[ಸಾಗರ ಮಾರಿಕಾಂಬ ಜಾತ್ರೆ ಫೆಬ್ರವರಿ 14 ರಿಂದ ಆರಂಭ]
ಕಾವೇರಿ ನದಿ ತೀರದಲ್ಲಿ ಮುತೈದೆಯರು ಕಳಸ ಪೂಜೆಯನ್ನು ಸಲ್ಲಿಸಿ, ಮುತ್ತೈದೆ ಭಾಗ್ಯ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸಿದರೆ, ಹರಕೆ ಹೊತ್ತಿದ್ದ ಭಕ್ತರು ಅರವಂಟಿಕೆಗಳನ್ನು ಮಾಡಿ ಬಿಸಿಲಿನಿಂದ ದಣಿದವರ ದಾಹಕ್ಕೆ ಮಜ್ಜಿಗೆ ಹಂಚಿದರು. ಫೆ.9ರ ಗುರುವಾರ ಸರಿರಾತ್ರಿಯಲ್ಲಿ ತೆಪ್ಪೋತ್ಸವ ಹಾಗೂ 14ರ ಮಂಗಳವಾರ ಪರ್ವತ ಪರಿಷೆ(ಬಸವನ ಮಾಲೆ) ನಡೆಯಲಿದೆ.