ಭೀಮನಕೊಲ್ಲಿಯಲ್ಲಿ ವೈಭವದ ಶ್ರೀ ಮಹದೇಶ್ವರ ಸ್ವಾಮಿ ರಥೋತ್ಸವ
ಎಚ್.ಡಿ.ಕೋಟೆ, ಫೆಬ್ರವರಿ 8: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭೀಮನಕೊಲ್ಲಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ವಿವಿಧ ಬಣ್ಣಗಳ ಬಟ್ಟೆಗಳಿಂದ, ಹೂವಿನಹಾರ ಮತ್ತು ಪುಷ್ಪಗಳಿಂದ ಸಿಂಗರಿಸಲಾದ ಸುಮಾರು ಅರುವತ್ತು ಅಡಿ ಎತ್ತರದ ರಥದಲ್ಲಿ ಮಹದೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರವಾಸೋದ್ಯಮ ಇಲಾಖೆಯಿಂದ 1ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಥವನ್ನು ಈ ಬಾರಿ ಮೆರವಣಿಗೆಯಲ್ಲಿ ಎಳೆದಿದ್ದು ವಿಶೇಷವಾಗಿತ್ತು. ರಥವು ಮಂಗಳವಾಧ್ಯ, ವೀರಭದ್ರನ ಕುಣಿತ, ಭಕ್ತರೊಂದಿಗೆ ರಥ ಬೀದಿಯಲ್ಲಿ ಸಾಗಿ ದೇವಸ್ಥಾನದಕ್ಕೆ ಪ್ರದಕ್ಷಿಣೆ ಬಂದು ಸ್ವಸ್ಥಾನಕ್ಕೆ ಮರಳಿತು[ಮುಡುಕುತೊರೆಯಲ್ಲಿ ವೈಭವದ ಬ್ರಹ್ಮರಥೋತ್ಸವ]
ರಥ ಸಾಗುತ್ತಿದ್ದರೆ ಇಕ್ಕೆಲಗಳಲ್ಲಿ ನಿಂತ ಭಕ್ತರು ದೇವರಿಗೆ ಪರಾಕ್ ಹೇಳಿ ಭಕ್ತಿಭಾವ ಮೆರೆದರು. ರಥೋತ್ಸವದ ಹಿನ್ನಲೆಯಲ್ಲಿ ಮಹದೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಹರಕೆ ಹೊತ್ತ ಭಕ್ತರು ಕಪಿಲ ನದಿಯಲ್ಲಿ ಮಾಘ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು. ಕೆಲವರು ಉರುಳು ಸೇವೆ ಮಾಡಿದರು.
ಈ ಜಾತ್ರೆಯಲ್ಲಿ ರೈತರು ತಮ್ಮ ದನ ಕರುಗಳನ್ನು ತೊಳೆದು ಹೂಗಳಿಂದ ಆಲಂಕರಿಸಿ ದೇವಸ್ಥಾನ ಮುಂಭಾಗಕ್ಕೆ ಕರೆತಂದು ಅಲ್ಲಿ ಹಾಕಿದ್ದ ಕೊಂಡದ ಸಮೀಪ ಪಂಜು ಸೇವೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ದೇವಸ್ಥಾನಕ್ಕೆ ಅಕ್ಕ ಪಕ್ಕದ ಹಳ್ಳಿಗಳಾದ ಗುಂಡತ್ತೂರು, ಹೊಸಹೊಳಲು, ಮಗ್ಗೆ, ಮಳಲಿ ಮೊದಲಾದ ಗ್ರಾಮಗಳ ಜನರು ಬರಲು ಅನುಕೂಲವಾಗುವಂತೆ ಕಪಿಲ ನದಿಯಲ್ಲಿ ದೇವಸ್ಥಾನ ಸಮಿತಿ ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ದೋಣಿ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂರು ದಿನಗಳ ಕಾಲ ಅನ್ನ ದಾಸೋಹವನ್ನು ಏರ್ಪಡಿಸಲಾಗಿದ್ದು, ಇಂದು(ಫೆ.8) ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಸಮರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭ ಸುಗಮ ಸಂಗೀತ, ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳು ತಂಡದವರಿಂದ ಜಾನಪದ ಗೀತೆಗಳ ಗಾಯನ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.