ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಲೋಗೋ, ಭಿತ್ತಿಚಿತ್ರ ಸಿದ್ಧ!
ಮೈಸೂರು, ಜುಲೈ 31: ಈ ಬಾರಿಯ ದಸರಾ ಸರಳ - ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ ತಿಳಿಸಿದ್ದಾರೆ. ಸೆಪ್ಟೆಂಬರ್ 21 ರಿಂದ 30ರವರೆಗೆ ನಡೆಯಲಿರುವ ದಸರಾ ಹಿನ್ನೆಲೆ ಇದೇ ವೇಳೆ ಲಾಂಛನ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ಕಳೆದ ಸೋಮವಾರ ಬೆಂಗಳೂರಿನಲ್ಲಿ ದಸರಾ ಕುರಿತಂತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆದಿದ್ದು, ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಣಯಿಸಿರುವಂತೆ ಈ ಬಾರಿಯೂ ದಸರಾ ಆಚರಣೆಯನ್ನು ಅತ್ಯಂತ ಸರಳವೂ ಅಲ್ಲದೇ ಅದ್ಧೂರಿಯೂ ಅಲ್ಲದೇ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಸಾಂಸ್ಕೃತಿಕ ದಸರಾ, ಮೆರವಣಿಗೆ, ಪಂಜಿನ ಕವಾಯತು, ಸ್ತಬ್ದಚಿತ್ರ, ರೈತದಸರಾ, ದಸರಾ ಕ್ರೀಡೆ, ಲಲಿತಕಲೆ, ಕರಕುಶಲಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗದಸರಾ, ಯುವ ಸಂಭ್ರಮ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರಮೇಳ, ಚಲನಚಿತ್ರೋತ್ಸವ, ದಸರಾ ದರ್ಶನ, ಕುಸ್ತಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಶ್ರೀರಂಗಪಟ್ಟಣ ಮತ್ತು ಚಾಮರಾಜನಗರದಲ್ಲಿ ನಡೆಸುವ ದಸರಾಕ್ಕೆ ಕಳೆದ ಬಾರಿ ನೀಡಿದಷ್ಟೇ ಅನುದಾನವನ್ನು ಈ ಬಾರಿಯೂ ನೀಡಲಾಗುವುದು. ಗಜಪಯಣಕ್ಕೆ ಆಗಸ್ಟ್ 2,4,6,10,14,17 ಶುಭದಿನಗಳನ್ನು ನೀಡಲಾಗಿದ್ದು, ಸೂಕ್ತದಿನಾಂಕ ನಿಗದಿಪಡಿಸಬೇಕಿದ ಎಂದರು.
ದಸರಾ ವೆಬ್ ಸೈಟ್ ಸಿದ್ಧಪಡಿಸಿ ಎಲ್ಲಾ ಮಾಹಿತಿಗಳನ್ನು ಅಪ್ ಡೇಟ್ ಮಾಡಲಾಗುವುದು. ಕಳೆದ ಬಾರಿ 17ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಬಾರಿ ಅವಶ್ಯಕತೆಯನುಸಾರ ಉಪಸಮಿತಿಗಳನ್ನು ಉಪವಿಶೇಷಾಧಿಕಾರಿ ಅಧೀನದಲ್ಲಿ ರಚಿಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಪಿ.ವಾಸು, ಡಾ. ಗೀತಾಮಹದೇವಪ್ರಸಾದ್, ಪೊಲೀಸ್ ಕಮಿಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಮುಡಾ ಆಯುಕ್ತ ಡಾ.ಎಂ.ಮಹೇಶ್, ಪಾಲಿಕೆ ಆಯುಕ್ತ ಜಿ.ಜಗದೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.