ಇದೇನು ಸದ್ದಾಂ ಹುಸೇನ್ ರಾಜ್ಯವೇ? : ಎಚ್ಡಿಕೆ ಪ್ರಶ್ನೆ
ಮೈಸೂರು, ಜುಲೈ 30 : ಧಾರವಾಡ ಜಿಲ್ಲೆಯ ನವಲಗುಂದದ ಬಳಿಯ ಯಮನೂರ ಗ್ರಾಮದಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಂಡಿಸಿದರು. 'ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾನ ಮರ್ಯಾದೆ ಇಲ್ಲವಾಗಿದೆ. ಯಾರೋ ಮಾಡಿದ ತಪ್ಪಿಗೆ ಅಮಾಯಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ' ಎಂದು ದೂರಿದರು.
ಮೈಸೂರಿನಲ್ಲಿ ಶನಿವಾರ ಮಾತನಾಡಿದ ಕುಮಾರಸ್ವಾಮಿ ಅವರು, 'ನಕ್ಸಲರ ಮಾದರಿಯಲ್ಲಿ ರೈತರನ್ನು ಜೈಲಿಗೆ ಕಳಿಸಲಾಗುತ್ತಿದೆ. ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದರೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು, ಸುಮ್ಮನಿದ್ದಾರೆ. ಅವರು ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ' ಎಂದರು.[ಧಾರವಾಡದಲ್ಲಿ ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು]
'ಹಿರಿಯ ಪೊಲೀಸ್ ಅಧಿಕಾರಿಗಳು ಯಮನೂರಿಗೆ ಹೋಗಿ ಜನರ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವುದು ಬಿಟ್ಟು ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೇನು ಸದ್ದಾಂ ಹುಸೇನ್ ರಾಜ್ಯವೇ?' ಎಂದು ಪ್ರಶ್ನಿಸಿದರು.[ಕರ್ನಾಟಕ ನಮ್ಮ ದೊಡ್ಡಣ್ಣ, ಶತ್ರುವಲ್ಲ: ಗೋವಾ ಸಿಎಂ]
'ರೈತರ ಪ್ರತಿಭಟನೆ ನಡೆಯುತ್ತಿರುವ ಜಾಗಕ್ಕೆ ಹೋದರೆ ಕುಮಾರಸ್ವಾಮಿ ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಬರುತ್ತದೆ ಎಂದು ಸುಮ್ಮನಿದ್ದೆ. ಆದರೆ, ಇಂದಿನ ಘಟನೆ ನೋಡಿ ನಾನೇ ಮುಂದಾಳತ್ವ ತೆಗೆದುಕೊಳ್ಳುತ್ತೇನೆ. ಸಂಜೆ ಯಮಲೂರಿಗೆ ಹೋಗುತ್ತೇನೆ' ಎಂದರು. [ಕರ್ನಾಟಕ ಬಂದ್ : ಚಿತ್ರಗಳು]
'ಇನ್ನು ಒಂದು ವಾರ ಯಮನೂರಿನಲ್ಲಿಯೇ ವಾಸ್ತವ್ಯ ಹೂಡಿ ಬಂಧಿಸಿರುವ ಎಲ್ಲಾ ರೈತರನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸುತ್ತೇನೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ' ಎಂದು ಸವಾಲು ಹಾಕಿದರು.