ನಂಜನಗೂಡಿನ ಶ್ರೀಕಂಠೇಶ್ವರನಿಗೆ ಜೈ ಎಂದ ಲಕ್ಷಾಂತರ ಭಕ್ತರು
ಮೈಸೂರು,ಮಾರ್ಚ್,21: ಕಣ್ಣು ಹಾಯಿಸಿದಷ್ಟೂ ಭಕ್ತ ಸಮೂಹ..ಬಿಸಿಲ ಬೇಗೆ ಮರೆಸಿದ ಶ್ರೀಕಂಠೇಶ್ವರನ ಅಲಂಕಾರ..ಎಲ್ಲರ ಬಾಯಿಯಲ್ಲೂ ಶ್ರೀಕಂಠೇಶ್ವರನ ಜಯಘೋಷ.. ಲಕ್ಷಾಂತರ ಭಕ್ತರ ನಡುವೆ ನಿಧಾನವಾಗಿ ಸಾಗುತ್ತಿದ್ದ ಪಂಚ ರಥಗಳು..
ಹೌದು ಇದು ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ಮಹಾ ರಥೋತ್ಸವ ಸಂದರ್ಭ ಕಂಡು ಬಂದ ಮನಮೋಹಕ ದೃಶ್ಯಗಳು..ಬಹಳಷ್ಟು ದಿನಗಳಿಂದ ಕಾಯುತ್ತಿದ್ದ ರಥೋತ್ಸವದ ಅಪೂರ್ವ ಕ್ಷಣಗಳಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಎಲ್ಲರೂ ರಥಕ್ಕೆ ಹಣ್ಣು ಜವನ ಎಸೆದು ಕೃತಾರ್ಥ ಭಾವ ಅನುಭವಿಸಿದರು.
ಬೆಳಿಗ್ಗೆ 6.08 ರಿಂದ 6.30ರೊಳಗೆ ಆಗಮಿಕ ಶಾಸ್ತ್ರದಂತೆ ಅರ್ಚಕ ವೃಂದ ಪೂಜಾ, ವಿಧಿ-ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮಹಾರಥೋತ್ಸವದ ಸಂದರ್ಭ ಮೊದಲಿಗೆ ಗಣಪತಿ ನಂತರ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ರಥ ಹೀಗೆ ಪಂಚರಥಗಳು ಸಾಗಿ ಬರುತ್ತಿದ್ದರೆ ನೆರೆದಿದ್ದ ಭಕ್ತ ಸಮೂಹ ಭಾವಪರವಶರಾಗಿ ಜಯಘೋಷ ಮೊಳಗಿಸಿದರು.[ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?]
ಲಕ್ಷಾಂತರ ಭಕ್ತರ ಸಮಾಗಮದಲ್ಲಿ ನಡೆದ ಶ್ರೀಕಂಠೇಶ್ವರ ಜಾತ್ರಾ ಸಂಭ್ರಮವನ್ನು, ಶ್ರೀಕಂಠೇಶ್ವರನ ಅಲಂಕಾರ, ಭಕ್ತರ ಭಕ್ತಿ ಭಾವ ಹೀಗೆ ಸುಂದರ ಸಂದರ್ಭಗಳು ಈ ಕೆಳಗಿನ ಸ್ಲೈಡ್ ನಲ್ಲಿದೆ.
ರಥದ ಭಾರ, ಎತ್ತರ ಎಷ್ಟು?
ಶ್ರೀಕಂಠೇಶ್ವರ ಮೂರ್ತಿಯನ್ನು ಹೊತ್ತೊಯ್ಯುವ ರಥವು ಸುಮಾರು 95 ಅಡಿ ಎತ್ತರ, 50 ಟನ್ ಭಾರವನ್ನು ಹೊಂದಿದೆ.
ಮಹಾರಥದ ಅಲಂಕಾರ ಹೇಗಿತ್ತು?
ಮಹಾವೈಭವದ ಜಾತ್ರೆಗೆ ಸಿದ್ಧವಾದ ರಥವನ್ನು ಹೂವು, ಬಾಳೆಕಂದು ಸೇರಿದಂತೆ ವಿವಿಧ ಬಗೆಯ ಹೂವಿನ ಹಾರ, ಎಳನೀರಿನಿಂದ ಅಲಂಕರಿಸಲಾಗಿತ್ತು.
ರಥವು ಯಾವ ಮಾರ್ಗವಾಗಿ ತೆರಳಿತು?
ಶ್ರೀಕಂಠೇಶ್ವರ ಮೂರ್ತಿಯನ್ನು ಹೊತ್ತ ರಥವು ರಾಷ್ಟ್ರಪತಿ ರಸ್ತೆ, ಪಾಠಶಾಲಾ ಬೀದಿ, ಅಂಗಡಿ ಬೀದಿ ಮೂಲಕ ಸುಮಾರು 1.5 ಕಿ.ಮೀ. ದೂರ ಚಲಿಸಿ ಮತ್ತೆ ಸ್ವಸ್ಥಾನಕ್ಕೆ ಸೇರಿತು. ಈ ಬಾರಿ ಯಾವುದೇ ಅಡೆ ತಡೆಯಿಲ್ಲದೆ ರಥ ಸಾಗಿದ್ದು ಭಕ್ತರಲ್ಲಿ ಹರ್ಷವನ್ನುಂಟು ಮಾಡಿತ್ತು.
ಜನರಲ್ಲಿ ಇರುವ ನಂಬಿಕೆ ಏನು?
ರಥೋತ್ಸವದಲ್ಲಿ ನವ ದಂಪತಿಗಳು ಹಣ್ಣು ಜವನ ಎಸೆದರೆ ದಾಂಪತ್ಯ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನವ ದಂಪತಿಗಳು ರಥ ತೆರಳುತ್ತಿದ್ದ ಸಂದರ್ಭ ಹಣ್ಣು ಜವನ ಎಸೆದು ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿಕೊಂಡರು.
ಜನಸಾಗರ ನೋಡುವುದೇ ಒಂದು ಹಬ್ಬ
ಬಹಳ ವೈಭವದಿಂದ ನಡೆಯುವ ಶ್ರೀಕಂಠೇಶ್ವರ ಜಾತ್ರೆಗೆ ನಾನಾ ಊರು, ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಅಷ್ಟು ಮಂಸಿಯನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯಲ್ಲಿ ಹಬ್ಬ. ಒಟ್ಟಾರೆ ರಥೋತ್ಸವವು ಸಡಗರ ಸಂಭ್ರಮದಿಂದ ನೆರವೇರಿತು.