ತಿಂಗಳ ಕೊನೆಗೆ ಕೆಎಸ್ ಒಯು ಮಾನ್ಯತೆ ನವೀಕರಣ?
ಮೈಸೂರು, ನವೆಂಬರ್ 17: ವಿವಿ ಅನುದಾನ ಆಯೋಗವು ನವೆಂಬರ್ ಅಂತ್ಯದ ಹೊತ್ತಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ ಮಾನ್ಯತೆಯನ್ನು ನವೀಕರಣಗೊಳಿಸುವ ಸಾಧ್ಯತೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ಈಗಾಗಲೇ ಯುಜಿಸಿ ಕೇಳಿರುವ ಎಲ್ಲ ದಾಖಲೆಗಳನ್ನು ನೀಡಿದ್ದು, ಇಲಾಖೆ ಕಾರ್ಯದರ್ಶಿ ದೆಹಲಿಗೆ ತೆರಳಿದ್ದಾರೆ. ಅವರು ಯುಜಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕೋರ್ಸ್ ಗಳ ಮಾನ್ಯತೆ ನವೀಕರಣ ಬಗ್ಗೆ ಚರ್ಚಿಸಲಿದ್ದಾರೆ ಎಂದರು.
ಕೋರ್ಸ್ ನವೀಕರಣದಿಂದ ಈಗ ಪ್ರಸ್ತುತ ಇರುವ ಕೋರ್ಸ್ ಗಳೊಂದಿಗೆ ಅನೇಕ ಕೋರ್ಸ್ ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಪಠ್ಯವೂ ಬದಲಾಗುವ ಸಾಧ್ಯತೆಯಿದೆ ಎಂದು ವಿವರಿಸಿದರು.[ಯುಜಿಸಿ ಶಾಕ್: ಕೆಎಸ್ ಒಯು ಮಾನ್ಯತೆ ರದ್ದು?]
ಇನ್ನು 'ಸಮಗ್ರ ವಿಶ್ವವಿದ್ಯಾಲಯಗಳ ಕಾಯಿದೆ'ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಇದರಿಂದ ವಿ.ವಿ.ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಶೇ 80ರಷ್ಟು ಕಡಿಮೆಯಾಗಲಿದೆ.
ವಿವಿಗಳಲ್ಲಿರುವ ಸಿಂಡಿಕೇಟ್ ಗಳ ಹೆಸರನ್ನು ಬದಲಿಸಿ, ಅವುಗಳಿಗೊಂದು ಹೊಸರೂಪ ಕೊಡಲಾಗುವುದು. ಮತ್ತಷ್ಟನ್ನು ಅಗತ್ಯತೆಗೆ ಅನುಗುಣವಾಗಿ ಸೇರಿಸಬೇಕಿದೆ. ಅಲ್ಲದೆ ಕೆಲವನ್ನು ಸರಿಮಾಡಬೇಕಿದೆ ಎಂದು ಹೇಳಿದರು.