ಸಂಗೀತಗಾರರ ಗಾಡಿ ಎಳೆಯುವ ಅಭಿಮನ್ಯು!
ಮೈಸೂರು, ಸೆಪ್ಟೆಂಬರ್ 18 : ಮೈಸೂರು ದಸರಾ ಜಂಬೂಸವಾರಿಗೆ ಸಂಬಂಧಿಸಿದಂತೆ ಗಜಪಡೆಗಳ ತಾಲೀಮು ಆರಂಭವಾಗಿದೆ. ಈ ಪೈಕಿ ಚಿನ್ನದ ಅಂಬಾರಿ ಹೊರುವ ಅರ್ಜುನ ಮತ್ತು ಸಂಗೀತ ಗಾಡಿ ಎಳೆಯುವ ಅಭಿಮನ್ಯುಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
ಈಗಾಗಲೇ ಭಾರ ಹೊರುವ ತಾಲೀಮು ನಡೆಸಲಾಗುತ್ತಿದ್ದು, ಮರಳು ಮೂಟೆ ಹೊತ್ತು ಗಜಪಡೆಗಳು ನಡೆಯುತ್ತಿವೆ. ಇದಾದ ಬಳಿಕ ಅರ್ಜುನನಿಗೆ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಿದರೆ, ಅಭಿಮನ್ಯುಗೆ ಸಂಗೀತಗಾರರ ಗಾಡಿ ಎಳೆಯುವ ತಾಲೀಮನ್ನು ನಡೆಸಲಾಗುತ್ತದೆ.[ದಸರಾ ನಿರೀಕ್ಷೆಯಲ್ಲಿ ಸಿಂಗಾರ-ಬಂಗಾರ ಮೈಸೂರು ಅರಮನೆ]
ಕಳೆದ ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಅಭಿಮನ್ಯು ಸಂಗೀತಗಾರರ ಗಾಡಿಯನ್ನು ಎಳೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬರುತ್ತಿದ್ದಾನೆ. ಜಂಬೂಸವಾರಿಯಲ್ಲಿ ಅರಮನೆ ಸಂಗೀತಗಾರರಿಗೆ ಮಹತ್ವದ ಸ್ಥಾನವಿದ್ದು, ಜಂಬೂಸವಾರಿ ಸಂದರ್ಭ ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಆನೆ ಅವರನ್ನು ಎಳೆದೊಯ್ಯುತ್ತದೆ.[ಮೈಸೂರು ದಸರಾ ಗಜಪಡೆಗಳಿಗೆ ಭಾರದ ತಾಲೀಮು ಆರಂಭ]
ಹಿಂದಿನ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆದುಕೊಂಡು ಬಂದಿದ್ದು, ಕಳೆದೊಂದು ದಶಕದಿಂದ ಗಜಪಡೆಯಲ್ಲಿ ಒಬ್ಬನಾದ ಅಭಿಮನ್ಯು ಈ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾನೆ. ಸಂಗೀತಗಾರರನ್ನು ಕೊಂಡೊಯ್ಯುವ ಬೃಹತ್ ಗಾಡಿ ಸುಸ್ಥಿತಿಯಲ್ಲಿದೆಯಾ ಎಂದು ಪರಿಶೀಲನೆ ನಡೆಸಿದ ಬಳಿಕ ಅಭಿಮನ್ಯು ಅದನ್ನು ಎಳೆದು ಗಾಡಿ ಸುಸ್ಥಿತಿಯಲ್ಲಿದೆ ಎಂಬುದನ್ನು ಮನದಟ್ಟು ಮಾಡಿಕೊಂಡ ಬಳಿಕ ಜಂಬೂಸವಾರಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.[ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!]
ಜಂಬೂ ಸವಾರಿಗೆ ಮುನ್ನ ನಡೆಯುವ ತಾಲೀಮಿನಲ್ಲಿ ಅಭಿಮನ್ಯು ತಾನು ಸಂಗೀತಗಾಡಿಯನ್ನು ಯಶಸ್ವಿಯಾಗಿ ಎಳೆಯುತ್ತೇನೆ ಎಂಬುದನ್ನು ಸಾಬೀತು ಪಡಿಸಬೇಕು ಅದಕ್ಕಾಗಿಯೇ ಪ್ರತ್ಯೇಕ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯುಗೆ ದಸರಾ ಜಂಬೂಸವಾರಿ ಹೊಸದೇನಲ್ಲ. ಕಳೆದ 17ವರ್ಷದಿಂದ ಜಂಬೂಸವಾರಿಯಲ್ಲಿ ಭಾಗವಹಿಸಿರುವ ಅನುಭವವಿದೆ. ಹಲವು ವರ್ಷಗಳಿಂದ ಸಂಗೀತಗಾರರ ಗಾಡಿಯನ್ನು ಯಶಸ್ವಿಯಾಗಿ ಎಳೆಯುತ್ತಿದ್ದಾನೆ.
ಒಂದು ಕಾಲದಲ್ಲಿ ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾನೆಯಾಗಿದ್ದ ಅಭಿಮನ್ಯುವನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಲಾಯಿತು. 50 ವರ್ಷ ಪ್ರಾಯವಾದರೂ ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ.