ಕಾರ್ತೀಕ ಸೋಮವಾರ, ನಂಜನಗೂಡಿನಲ್ಲಿ ಜನಸಾಗರ
ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಇಲ್ಲಿನ ಯಾತ್ರಾ ಸ್ಥಳವಾದ ಶ್ರಿ ಕಂಠೇಶ್ವರ ದೇವಾಲಯಕ್ಕೆ ಕಾರ್ತಿಕ ಮಾಸದ ಭರಣಿ ನಕ್ಷತ್ರದ ಗೌರಿ ಹುಣ್ಣಿಮೆ ಕಾರ್ತಿಕ ಸೋಮವಾರದಂದು ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಂಜನಗೂಡು, ನವೆಂಬರ್ 14 : ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಇಲ್ಲಿನ ಯಾತ್ರಾ ಸ್ಥಳವಾದ ಶ್ರಿ ಕಂಠೇಶ್ವರ ದೇವಾಲಯಕ್ಕೆ ಕಾರ್ತಿಕ ಮಾಸದ ಭರಣಿ ನಕ್ಷತ್ರದ ಗೌರಿ ಹುಣ್ಣಿಮೆ ಕಾರ್ತಿಕ ಸೋಮವಾರದ ಹಿನ್ನಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಷ ಕಾರ್ತಿಕ ಮಾಸದ ಭರಣಿ ನಕ್ಷತ್ರದ ಗೌರಿ ಹುಣ್ಣಿಮೆ ಪ್ರಯುಕ್ತ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಭಾನುವಾರ ಸಂಜೆಯಿಂದಲೇ ಭಕ್ತರು ಆಗಮಿಸಿ ವಾಸ್ತವ್ಯ ಹೂಡಿದರು. ಮುಂಜಾನೆ 4 ಗಂಟೆಯಿಂದಲೇ ಕಪಿಲಾನದಿಯಲ್ಲಿ ಮಿಂದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಅಲ್ಲದೆ ತೂಕದ ತುಲಾಭಾರ, ಉರುಳುಸೇವೆ, ಈಡುಗಾಯಿ ಸೇವೆ, ದೇವಿಗೆ ಕುಂಕುಮಾರ್ಚನೆ, ಶ್ರೀಕಂಠೇಶ್ವರ ಸ್ವಾಮಿಗೆ ಬೆಳ್ಳಿ ಅಂಗಾಂಗಳ ಹರಕೆಯನ್ನು ಹುಂಡಿಗೆ ಹಾಕಿ ಶ್ರದ್ಧಾ-ಭಕ್ತಿಗಳಿಂದ ಸೇವೆ ಸಲ್ಲಿಸಿದರು.
ಗೌರಿ ಹುಣ್ಣಿಮೆ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ಚಿನ್ನದ ಕೊಳಗ ತೊಡಿಸಿ, ನಾನಾ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರಿಗೆ ಪಂಚತೀರ್ಥಗಳ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಶಾಲಾನ್ಯ ಅರ್ಪಣೆ, ಕಲ್ಲು-ಸಕ್ಕರೆ, ಪೂಜೆ ನೆರವೇರಿಸಲಾಯಿತು ನಂತರ ಮಹಾಮಂಗಳಾರತಿ ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಯಿತು.[ಸಹಸ್ರಾರು ಭಕ್ತರ ಸಮಾಗಮದಲ್ಲಿ ನಂಜನಗೂಡು ರಥೋತ್ಸವ]
ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಜಯಪ್ರಕಾಶ್ ಮಾತನಾಡಿ ಗೌರಿ ಹುಣ್ಣಿಮೆ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಆಗಮಿಸಿದ್ದ ಭಕ್ತರಿಗೆ ವಿಶೇಷವಾಗಿ ಅನ್ನ, ಸಾಂಬಾರ್, ಪಾಯಸ, ಪಲ್ಯದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ದೇವಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆದಾಯ ಹರಿದು ಬಂದಿದೆ ಎಂದರು.