ಮೈಸೂರು: KSOUಗೆ ಕೆಲವೇ ದಿನಗಳಲ್ಲಿ ಮಾನ್ಯತೆ?
ಮೈಸೂರು, ಜೂನ್ 22 : 95 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಹುದಿನಗಳ ಕನಸು ಸಾಕಾರಗೊಳ್ಳುವ ಕನಸು ಈಗ ಚಿಗುರೊಡೆದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶೈಕ್ಷಣಿಕ ( 2017-18ನೇ ಸಾಲಿನಿಂದ ) ಚಟುವಟಿಕೆಗಳು ಮತ್ತೆ ಆರಂಭವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಎಸ್.ಕೆ.ಶರ್ಮ ಅವರೊಂದಿಗೆ ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಬುಧವಾರ ನಡೆಸಿದ ಸಭೆ ಫಲಪ್ರದವಾಗಿದೆ ಎಂದು ತಿಳಿದು ಬಂದಿದೆ.
ಯುಜಿಸಿ ಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿದ ಶರ್ಮ , ಮುಕ್ತ ವಿವಿ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿ 2017-18ನೇ ಸಾಲಿನಲ್ಲಿ ಹೊಸ ಕೋರ್ಸ್ ಗಳನ್ನು ಆರಂಭಿಸಬಹುದು. ಇದಕ್ಕಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಜತೆಗೆ ಈ ಕುರಿತು ಮುಂದಿನ ಒಂದು ವಾರದಲ್ಲಿ ಯುಜಿಸಿ ವತಿಯಿಂದ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
2013-14ನೇ ಶೈಕ್ಷಣಿಕ ಸಾಲಿನ ನಂತರ ವಿವಿ ನೀಡಿರುವ ಕೋರ್ಸ್ ಗಳ ಮಾನ್ಯತೆ ರದ್ದು ಪಡಿಸಿದ ವಿಷಯಗಳೇ ಬೇರೆ, 17-18ರಿಂದ ಆರಂಭಿಸುವ ಕೋರ್ಸ್ ಗೆ ನೀಡಿರುವ ಅನುಮತಿಯೇ ಬೇರೆ ಈ ಎರಡೂ ಒಂದೇ ಅಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.