ಪ್ರಮೋದಾದೇವಿ ಮೇಲೆ ಕಾಂತರಾಜ ಅರಸ್ ಅಸಮಾಧಾನ
ಮೈಸೂರು, ಜ. 24: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೃತರಾದ ನಂತರ ಯದುವಂಶದ ಉತ್ತರಾಧಿಕಾರಿ ಕುರಿತು ಎದ್ದಿದ್ದ ವಿವಾದ ಇನ್ನೂ ಮುಂದುವರಿದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದಿವಂಗತ ಸಹೋದರಿಯ ಪುತ್ರ ಕಾಂತರಾಜ ಅರಸ್ ಅವರೇ ಉತ್ತರಾಧಿಕಾರಿಯಾಗುವ ನಿರೀಕ್ಷೆ ಸುಳ್ಳಾಗುವ ಸಂಭವವಿದೆ.
ಈ ಕುರಿತು ಟಿವಿ ಚಾನಲ್ಗೆ ಪ್ರತಿಕ್ರಿಯೆ ನೀಡಿರುವ ಕಾಂತರಾಜ ಅರಸ್, "ನನಗೆ ಮೊದಲು ಉತ್ತರಾಧಿಕಾರಿ ಮಾಡುವುದಾಗಿ ಹೇಳಿ ಪ್ರಮೋದಾದೇವಿ ಕರೆಸಿಕೊಂಡಿದ್ದರು. ನಾನಾಗಿಯೇ ಹೋಗಿರಲಿಲ್ಲ" ಎಂದು ಹೇಳಿದ್ದಾರೆ. [ಶೃಂಗೇರಿ ಶ್ರೀಗಳ ಜೊತೆ ಚರ್ಚಿಸಿ ಉತ್ತರಾಧಿಕಾರಿ ನೇಮಕ]
"ಆದರೆ, ಈಗ ನಿನಗೆ ಮದುವೆಯಾಗಿದೆ. ಮದುವೆಯಾದವರನ್ನು ಉತ್ತರಾಧಿಕಾರಿ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಮದುವೆಯಾಗಿರುವುದು ಅವರಿಗೆ ಮೊದಲೇ ತಿಳಿದಿತ್ತು. ಆಗ ಮದುವೆ ಕುರಿತು ಯಾವುದೇ ಪ್ರಸ್ತಾಪ ಮಾಡಿರಲಿಲ್ಲ" ಎಂದು ಹೇಳಿದ್ದಾರೆ. [ಯದುವಂಶಕ್ಕೆ ಉತ್ತರಾಧಿಕಾರಿ ಯಾರು]
"ಒಂದು ವೇಳೆ ಆಗಲೇ ನನ್ನ ಮದುವೆಯ ವಿಚಾರ ಹೇಳಿ, ನನ್ನ ಮಗನನ್ನೇ ಉತ್ತರಾಧಿಕಾರಿಯಾಗಿ ನೇಮಿಸುವ ಕುರಿತು ಕೇಳಿದ್ದರೆ ಬಹುಶಃ ನಾನು ಒಪ್ಪುತ್ತಿರಲಿಲ್ಲ. ಅಲ್ಲದೆ, ನಮ್ಮದೇ ಕುಟುಂಬದ ಕೆಲವರು ನನ್ನ ಹಾಗೂ ನನ್ನ ಪತ್ನಿಯ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ" ಎಂದು ಹೇಳಿದ್ದಾರೆ. ಉತ್ತರಾಧಿಕಾರಿ ಆಯ್ಕೆ ಕುರಿತು ಮತ್ತೆ ಪ್ರಮೋದಾದೇವಿ ಅವರನ್ನು ಪ್ರಶ್ನಿಸುವುದಿಲ್ಲ ಎಂದು ಕಾಂತರಾಜ ಅರಸ್ ಸ್ಪಷ್ಟಪಡಿಸಿದ್ದಾರೆ. [ಒಡೆಯರ್ ಕುಟುಂಬಕ್ಕಿದೆ ಅಲಮೇಲಮ್ಮನ ಶಾಪ]
ಕಾಂತರಾಜ ಅರಸ್ ಅವರು ಶ್ರೀಕಂಠದತ್ತ ಒಡೆಯರ್ ಅಂತಿಮ ಸಂಸ್ಕಾರದ ಎಲ್ಲ ವಿಧಿವಿಧಾನಗಳನ್ನು ನೆರೆವೇರಿಸಿದ್ದರು. ಆದ್ದರಿಂದ ಅವರೇ ಯದುವಂಶದ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಎಲ್ಲರೂ ನಂಬಿದ್ದರು.