ಮೈಸೂರಿನಲ್ಲಿ 83ನೇ ಸಾಹಿತ್ಯ ಸಮ್ಮೇಳನ: ಸಿಹಿ ಹಂಚಿ ಸಂಭ್ರಮಾಚರಣೆ
ಮೈಸೂರು , ಡಿಸೆಂಬರ್. 5 : ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಮೈಸೂರಿನ ಕನ್ನಡ ಪರ ಅಭಿಮಾನಿಗಳಲ್ಲಿ ಸಂಭ್ರಮದ ಮನೆ ಮಾಡಿದೆ.
ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಕುರಿತು ರಾಯಚೂರಿನ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ.
ಇದರಿಂದ ಮೈಸೂರು ಕನ್ನಡ ವೇದಿಕೆ ಭಾನುವಾರ ಸಿಹಿ ಹಂಚಿ ಸಂಭ್ರವನ್ನಾಚರಿಸಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಜಮಾಯಿಸಿದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. [ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ!]
ಈ ಸಂದರ್ಭ ಮಾತನಾಡಿದ ಕಾರ್ಯಕರ್ತರು 2017ರಲ್ಲಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನಾಚರಿಸುತ್ತಿರುವುದು ಖುಷಿ ತಂದಿದೆ. 26 ವರ್ಷಗಳ ಬಳಿಕ ಮತ್ತೆ ಮೈಸೂರು ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದಕ್ಕೆ ಒಪ್ಪಿಕೊಂಡಿರುವುದು ಸಂತಸ ತಂದಿದೆ ಎಂದರು.
ದಲಿತ ಪರ ಹೋರಾಟಗಾರ ಕೆ.ಎಸ್.ಶಿವರಾಂ, ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.