ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ
ಕೆಆರ್ ಎಸ್, ಕಬಿನಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ? ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನ ಜನರಿಗೆ ಬೇಸಿಗೆ ಹೇಗಿರಲಿದೆ ಎಂಬುದರ ವಾಸ್ತವ ವರದಿ ಇದು. ಒನ್ಇಂಡಿಯಾ ಕನ್ನಡದ ವರದಿಗಾರ್ತಿ ಯಶಸ್ವಿನಿ ಅಂಕಿ-ಅಂಶದ ಸಮೇತ ವರದಿ ಮಾಡಿದ್ದಾರೆ
ಮೈಸೂರು, ಫೆಬ್ರವರಿ 23: ಈ ಸಲದ ಬೇಸಿಗೆ ಹಿಂದಿನ ಬೇಸಿಗೆಗಳಂತೆ ಖಂಡಿತ ಇರಲ್ಲ. ಅದರಲ್ಲೂ ಬೆಂಗಳೂರು, ಮೈಸೂರು ಹಾಗೂ ಮಂಡ್ಯದವರಿಗಂತೂ ಭೀಕರವಾಗಲಿದೆ ಬೇಸಿಗೆ. ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ, ಕಬಿನಿಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದುಹೋಗಿದೆ. ಹೀಗಾಗಿ ನೀರಿಗೆ ಸಮಸ್ಯೆ ಆಗುವುದಂತೂ ಖಾತ್ರಿ.
ಇನ್ನು ಬೆಂಗಳೂರು ನೀರು ಸರಬರಾಜು ಮಂಡಳಿ ಬೇರೆ ದಾರಿಯಿಲ್ಲದೆ ಇನ್ನಷ್ಟು ಕೊಳವೆಬಾವಿ ಕೊರೆಸಬೇಕಿದೆ. ಸೋಮವಾರದ ವೇಳೆಗೆ (ಫೆಬ್ರವರಿ 20) ಕೆಆರ್ ಎಸ್ ಜಲಾಶಯದಲ್ಲಿ 5,932 ಟಿಎಂಸಿ ಅಡಿ ನೀರಿತ್ತು. ಕೆಆರ್ ಎಸ್ ನ ಒಟ್ಟಾರೆ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿ ಅಡಿ ಇದೆ.[ತೀವ್ರ ಬರ: ಮಂಗಳೂರು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ]
ಇನ್ನು ಕಬಿನಿ ಜಲಾಶದಲ್ಲಿ ಕಳೆದ ವರ್ಷ ಈ ವೇಳೆಗೆ 5.56 ಟಿಎಂಸಿ ಅಡಿ ನೀರಿತ್ತು. ಆದರೆ ಈ ಬಾರಿ 2.32 ಟಿಎಂಸಿ ಅಡಿ ನೀರಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ತಿಳಿಸಿದೆ. ಬಿಸಿಲಿನ ತಾಪಕ್ಕೆ ಆವಿಯಾಗುವುದು ಹಾಗೂ ಪ್ರಸರಣ ನಷ್ಟ ಕೂಡ ಆಗುತ್ತಿರುವುದರಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬರಿದಾಗುತ್ತಿದೆ, ಮಾರ್ಚ್ ವೇಳೆಗೆ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ.
ಕೆಆರ್ ಎಸ್ ಜಲಾಶಯದ ಮಟ್ಟ 5.59ಟಿಎಂಸಿ ಗೆ ತಲುಪಿದರೆ ಜಲಚರಗಳಿಗೂ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕಬಿನಿ ನೀರಿನ ಬಳಕೆಗಾಗಿ ಜನ ಕಬಿನಿ ನೀರಿನ ಡೆಡ್ ಸ್ಟೋರೇಜ್ ಹಂತ ತಲುಪಬೇಕಾದ ಅನಿವಾರ್ಯ ಬಂದೊದಗಿದೆ.[ಕೆರೆಗಳಿಗೆ ನೀರು ತುಂಬಿಸಿ: ಮೈಸೂರಿನಲ್ಲಿ ವಾಟಾಳ್ ಪ್ರತಿಭಟನೆ]
ಇನ್ನು ಜಲಾಶಯದಲ್ಲಿರುವುದು 4 ಟಿಎಂಸಿ ಅಡಿ ನೀರು ಮಾತ್ರ
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಸದ್ಯ 14.36 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 29.82 ಟಿಎಂಸಿ ಅಡಿ ನೀರಿತ್ತು. ನಾಲ್ಕು ಜಲಾಶಯಗಳಲ್ಲಿ ಬಳಸಲು ಸಾಧ್ಯವಾಗದ ನೀರು ಒಟ್ಟು 9 ಟಿಎಂಸಿ ಅಡಿ ಇರಬೇಕು. ಬೇಸಿಗೆಯಲ್ಲಿ ಜಲಾಶಯಗಳಲ್ಲಿ ಶೇ 10ರಷ್ಟು ಆವಿಯಾಗುತ್ತದೆ. ಅಷ್ಟೇ ಪ್ರಮಾಣದ ನೀರು ಇಂಗಿ ಹೋಗುತ್ತದೆ. ಈ ಸಲ ಬಿಸಿಲ ಬೇಗೆಯಿಂದಾಗಿ ಇದರ ಪ್ರಮಾಣ ಶೇ 15ರಷ್ಟು ಹೆಚ್ಚಿದೆ.
ಅಧಿಕ ಪ್ರಮಾಣದ ವಿದ್ಯುತ್ ಬೇಕು
ಜಲಾಶಯದ ಗರಿಷ್ಠ ಮಟ್ಟ 124 ಅಡಿಯಿದ್ದು, ಪ್ರಸ್ತುತ 79 ಅಡಿ ನೀರಿದೆ. 49.50 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 5.99 ಟಿಎಂಸಿ ಅಡಿ ನೀರಿದೆ. ಅದರಲ್ಲಿ 2.73 ಟಿಎಂಸಿ ಅಡಿ ನೀರು (ಡೆಡ್ ಸ್ಟೋರೇಜ್) ಬಳಕೆಗೆ ಸಿಗುವುದಿಲ್ಲ. ಜಲಾಶಯದ ಮಟ್ಟ 60 ಅಡಿಗೆ ಕುಸಿದರೆ ಡೆಡ್ ಸ್ಟೋರೇಜ್ ಹಂತ ತಲುಪುತ್ತದೆ.
'ಎರಡು ತಿಂಗಳಲ್ಲಿ ಒಳಹರಿವು ಬರಲಿದೆ ಎಂಬ ನಂಬಿಕೆ ಇಟ್ಟುಕೊಂಡೇ ಈ ಕಾರ್ಯಾಚರಣೆ ನಡೆಸಬೇಕಾಗುತ್ತದೆ' ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 'ತಳಮಟ್ಟದ ನೀರನ್ನು ಪಂಪ್ ಮಾಡಲು ಅಧಿಕ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸಬೇಕಿದೆ. ಅಲ್ಲದೆ ಜಲಾಶಯದಲ್ಲಿರುವ ಎಲ್ಲ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ' ಎಂದು ಅವರು ತಿಳಿಸುತ್ತಾರೆ.
ಡೆಡ್ ಸ್ಟೋರೇಜ್ ಬಳಕೆ ಇದೇ ಮೊದಲು
ನೀರಿನ ಸಮಸ್ಯೆ ಎಷ್ಟೇ ಗಂಭೀರ ಸ್ವರೂಪದಲ್ಲಿದ್ದರೂ ಕೆಆರ್ ಎಸ್ ಡೆಡ್ ಸ್ಟೋರೇಜ್ ನೀರು ಬಳಸಿರಲಿಲ್ಲ. ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಒಂದು ಸಲ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲೂ ಈ ಹಿಂದೆ ನದಿಗಳ ಡೆಡ್ ಸ್ಟೋರೇಜ್ ಬಳಸಿದ ಉದಾಹರಣೆ ಇಲ್ಲ' ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಆರ್ ಎಸ್ ಜಲಾಶಯ ನಿರ್ಮಾಣವಾಗಿದ್ದು 1925ರಲ್ಲಿ. ಜಲಾಶಯಕ್ಕೆ 90 ವರ್ಷ ಆಗಿದೆ. 15 ವರ್ಷಗಳ ಹಿಂದಿನ ಅಂಕಿ- ಅಂಶಗಳ ಪ್ರಕಾರ ಜಲಾಶಯದಲ್ಲಿ 1.05 ಟಿಎಂಸಿ ಅಡಿ ಹೂಳು ಇತ್ತು. ಈಗ ಅದು ಮತ್ತಷ್ಟು ಹೆಚ್ಚಾಗಿರುತ್ತದೆ. ಡೆಡ್ ಸ್ಟೋರೇಜ್ ನೀರನ್ನು ಪಂಪ್ ಮಾಡಿದರೂ ನಗರಕ್ಕೆ ನೀರು ಸಿಗುವುದು ಅನುಮಾನ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾ ರಾವ್ ವಿಶ್ಲೇಷಿಸುತ್ತಾರೆ.
ಸಾಂಸ್ಕೃತಿಕ ನಗರಿಯಲ್ಲಿ ಕುಸಿಯುತ್ತಿದೆ ಅಂತರ್ಜಲ ಮಟ್ಟ
ಮೈಸೂರು ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಬರ ಎರಡು ವರ್ಷಗಳಿಂದ ಆವರಿಸಿದ್ದು, ಮಳೆಯ ತೀವ್ರ ಕೊರತೆ ಹಾಗೂ ಗರಿಷ್ಠ ಉಷ್ಣಾಂಶದಿಂದ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿ ಬೋರ್ ವೆಲ್ ಗಳೂ ಬತ್ತಿಹೋಗಿವೆ. ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ಅನಿಯಮಿತ ಮಳೆ, ಕೈಕೊಟ್ಟ ಮುಂಗಾರು, ಕೊಳವೆ ಬಾವಿಗಳಿಂದ ಹೆಚ್ಚು ನೀರನ್ನು ಬಳಸಿದ್ದು ಮುಂತಾದ ಪ್ರಾಕೃತಿಕ ಕಾರಣಗಳಿಂದ ಅಂತರ್ಜಲ ಮರುಪೂರಣ (ರೀಚಾರ್ಜ್) ಅಗುವಲ್ಲಿ ವಿಫಲವಾಗಿದೆ. 40 ವರ್ಷಗಳಲ್ಲಿ ಈ ರೀತಿಯ ಪರಿಸ್ಥಿತಿ ತಲೆದೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಂತರ್ಜಲ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಹಲವೆಡೆ ಅಂತರ್ಜಲ ಮಟ್ಟವನ್ನು ಕಳೆದ ಡಿಸೆಂಬರ್ ನಲ್ಲಿ ಪರೀಕ್ಷಿಸಿದ್ದು, ಕೆಲವೆಡೆ ಸ್ವಲ್ಪ ಏರಿಕೆ ಕಂಡು ಬಂದಿದ್ದರೆ, ಮತ್ತೆ ಕೆಲವೆಡೆ ಭಾರಿ ಇಳಿಕೆ ಕಂಡು ಬಂದಿದೆ.
ಇಡೀ ಮೈಸೂರಿನಲ್ಲಿ ಕಡಿಮೆ ನೀರಿನ ಪ್ರಮಾಣ
ಕಬಿನಿ ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಮುಳ್ಳೂರು ಹಾಗೂ ನಂಜನಗೂಡು ತಾಲ್ಲೂಕಿನ ನಂಜನಗೂಡು ಪಟ್ಟಣದ ಕೊಳವೆ ಬಾವಿಗಳಲ್ಲಿ ನಡೆಸಿದ ಅಧ್ಯಯನದಲ್ಲಿ 0.04ಮೀ. ಮಾತ್ರ ಕನಿಷ್ಠ ಹೆಚ್ಚಳ ಕಂಡು ಬಂದರೆ, ಪಿರಿಯಾಪಟ್ಟಣ ತಾಲೂಕಿನ ಸುಳಗೋಡು ಅಧ್ಯಯನ ಕೊಳವೆ ಬಾವಿಯಲ್ಲಿ ಗರಿಷ್ಠ ಏರಿಕೆ 3,48 ಮೀ. ಕಂಡುಬಂದಿದೆ.
ಕೆ.ಆರ್.ನಗರ ತಾಲ್ಲೂಕಿನ ತಂದ್ರೆ ಅಧ್ಯಯನ ಕೊಳವೆ ಬಾವಿಯಲ್ಲಿ ಕನಿಷ್ಠ ಇಳಿಕೆ 0.05 ಮೀ. ಕಂಡು ಬಂದಿದ್ದು, ಬೊಮ್ಮೇನಹಳ್ಳಿಯಲ್ಲಿ ಗರಿಷ್ಠ ಇಳಿಕೆ 4.33 ಮೀ. ಆಗಿರುತ್ತದೆ. ಉಳಿದ 35 ಕೊಳವೆ ಬಾವಿಗಳಲ್ಲಿ 0.05 ರಿಂದ 4.33 ಮೀ. ವರೆಗೆ ಇಳಿಕೆಯಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ ಬಾವಿಗಳಲ್ಲಿ ಶೇ 64ರಷ್ಟು ಇಳಿಕೆ ಆಗಿದ್ದು, ಶೇ.19 ಬಾವಿಗಳಲ್ಲಿ ಮಾತ್ರ ಏರಿಕೆ ಸ್ಥಿತಿ ಕಂಡು ಬಂದಿದೆ. ಶೇ. 2ರಷ್ಟು ಮಾತ್ರ ಸ್ಥಿರ ಜಲಮಟ್ಟ ದಾಖಲಾಗಿದೆ. ಶೇ.15 ಅಧ್ಯಯನ ಬಾವಿಗಳಲ್ಲಿ ಅಳತೆ ಕಾರ್ಯ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಮೇ ಅಂತ್ಯದವರೆಗೆ ಮತ್ತಷ್ಟು ಅಂತರ್ಜಲ ಕಡಿಮೆಯಾಗಲಿದೆ. ಜೂನ್ ನಲ್ಲಿ ನಿಗದಿಯಂತೆ ಮಳೆ ಆಗದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು.
ಮಾರಕವಾಗುತ್ತಿದೆ ಕಾಂಕ್ರೀಟ್
ರಸ್ತೆಗಳ ಡಾಂಬರು ಕಾಮಗಾರಿ ಮಾಡುವಾಗ ಬದಿಯಲ್ಲಿ ಮಳೆ ನೀರು ಇಂಗುವಂತಹ ವ್ಯವಸ್ಥೆಯನ್ನು ಮಾಡದಿರುವುದು, ರಸ್ತೆ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಹಾಗೂ ಅದು ಭೂಮಿಯನ್ನು ಸೇರುವ ರೀತಿ ವೈಜ್ಞಾನಿಕವಾಗಿ ವಿನ್ಯಾಸ ಮಾಡದಿರುವುದು, ರಸ್ತೆ ಬದಿಯಲ್ಲಿ ಮರಗಳ ಸುತ್ತ ಡಾಂಬರು ಹಾಕುತ್ತಿರುವುದು, ಇಂಗುಗುಂಡಿಗಳನ್ನು ನಿರ್ಮಿಸದಿರುವುದು. ಮಳೆ ನೀರು ಹರಿದು ಹೋಗುವ ಚರಂಡಿಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿರುವುದು ಅಂತರ್ಜಲವೃದ್ಧಿಗೆ ಅಡ್ಡಿಯಾಗಿವೆ.
ನೀರು ಆಳಕ್ಕೆ ಹೋದಷ್ಟೂ ಫ್ಲೋರೈಡ್ ಅಂಶ ಹೆಚ್ಚು
ನೀರನ್ನು ಮಿತಿಗಿಂತ ಹೆಚ್ಚಾಗಿ ಭೂಮಿಯಿಂದ ತೆಗೆದರೆ ಹೆಚ್ಚಿನ ಪ್ರಮಾಣದ ಲವಣಗಳು ಸಾರೀಕರಣವಾಗುವುದುಂಟು. ಗ್ರಾನೈಟ್ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಅದರಲ್ಲಿ ಸಹಜವಾಗಿರುವ ಫ್ಲೋರೈಡ್ ಖನಿಜ ನೀರಿನಲ್ಲಿ ವಿಲೀನವಾಗಿ ಅದನ್ನು ಬಳಸಿದವರಿಗೆ ಫ್ಲೋರೋಸಿಸ್ ಎಂಬ ಕಾಯಿಲೆ ಬರುತ್ತದೆ.
ಮೆಕ್ಕಲು ಮಣ್ಣಿನಲ್ಲಿ ಆರ್ಸೆನಿಕ್ ಬೆರೆತು ತೀರ ವಿಷಕಾರಿಯಾಗಿ ಅನೇಕ ಚರ್ಮ ಕಾಯಿಲೆಗೆ ಕಾರಣವಾಗಿರುವುದೂ ಉಂಟು. ಸೀಸ, ಪಾದರಸ ಮತ್ತು ಆರ್ಸೆನಿಕ್ ಖನಿಜಗಳು ಸುಲಭವಾಗಿ ನೀರಿನಲ್ಲಿ ವಿಲೀನವಾಗುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.
ಅಂತರ್ಜಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಲಿಕ, ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನಿಸಿಯಮ್, ಸೋಡಿಯಮ್, ಕಾರ್ಬೋನೇಟ್, ಬೈ ಕಾರ್ಬೋ ನೇಟ್, ಸಲ್ಫೇಟ್, ಕ್ಲೋರೈಡ್ ಮತ್ತು ನೈಟ್ರೇಟ್ ಗಳು ವಿಲೀನ ಸ್ಥಿತಿಯಲ್ಲಿರಬಹುದು. ಇವುಗಳ ಪ್ರಮಾಣ ಇಂತಿಷ್ಟೇ ಎಂದು ಹೇಳಲು ಸಾಧ್ಯವಿಲ್ಲ.
ಕರಗುತ್ತಿದೆ ಅಂತರ್ಜಲ ಭಂಡಾರ
ನಿರಂತರ ನೀರೆತ್ತುವುದರಿಂದಾಗಿ ಅಂತರ್ಜಲ ಮಟ್ಟ ಕುಸಿದು ಈಗ ಸುಮಾರು 200-250 ಮೀಟರ್ ವರೆಗೆ ಕೊಳವೆಬಾವಿಯನ್ನು ಕೊರೆಯಬೇಕಾದ ಸಂದರ್ಭ ಎದುರಾಗಿದೆ. ಅಲ್ಲದೆ ಕೈಗಾರಿಕೆಗಳಿಗೆ ವ್ಯಾಪಕವಾಗಿ ನೀರು ಬಳಸುವುದು ಕೂಡ ಬಹು ದೊಡ್ಡ ಸಮಸ್ಯೆಯಾಗಿದ್ದು, ಅಂತರ್ಜಲ ಭಂಡಾರ ಕರಗುತ್ತಿದೆ. ಇದರ ಜೊತೆಗೆ ನೀರಿನ ಮರುಪೂರಣ (ರೀಚಾರ್ಜ್) ಸಮರ್ಪಕವಾಗಿ ಆಗುತ್ತಿಲ್ಲ.