ಸೋಮವಾರದ ತನಕ ಮರೀಗೌಡಗೆ ಜೈಲೇ ಗತಿ
ಮೈಸೂರು, ಆಗಸ್ಟ್ 05 : ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಮುಖಂಡ ಮರೀಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ಅವರು ಬುಧವಾರ ಪೊಲೀಸರ ಮುಂದೆ ಶರಣಾಗಿದ್ದರು.
ಮರೀಗೌಡ ಪರ ವಕೀಲ ಸಿ.ಎಂ.ಜಗದೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಮೈಸೂರಿನ ಜೆಎಂಎಫ್ಸಿ ಕೋರ್ಟ್ನಲ್ಲಿ ಶುಕ್ರವಾರ ನಡೆಯಿತು. ಸಹಕಾರಿ ಸರ್ಕಾರಿ ಅಭಿಯೋಜಕರು ಜಾಮೀನಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಆದ್ದರಿಂದ, ಅರ್ಜಿಯ ವಿಚಾರಣೆಯನ್ನು ಸೋಮವಾರ (ಆಗಸ್ಟ್ 8)ಕ್ಕೆ ಮುಂದೂಡಲಾಗಿದೆ.[ಮರೀಗೌಡ ಶರಣಾಗತಿ, ನ್ಯಾಯಾಂಗ ಬಂಧನ, ಜಾಮೀನಿಗೆ ಅರ್ಜಿ]
ಬುಧವಾರ ಮೈಸೂರಿನ ನಜರಾಬಾದ್ ಠಾಣೆ ಪೊಲೀಸರ ಮುಂದೆ ಶರಣಾದ ಮರೀಗೌಡ ಅವರನ್ನು 3ನೇ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶೆ ಜಿ.ದೀಪಾ ಅವರು 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.[ಶರಣಾದ ಕೆ.ಮರೀಗೌಡ]
ಮರೀಗೌಡ ಅವರ ಪರ ವಕೀಲರು ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಗುರುವಾರ ಆಗಸ್ಟ್ 5ರ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಇಂದು ಸೋಮವಾರಕ್ಕೆ ಮುಂದೂಡಲಾಗಿದ್ದು, ಮರೀಗೌಡ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. [ಮರೀಗೌಡ ಕಾಂಗ್ರೆಸ್ಸಿನಿಂದ ಅಮಾನತು]
ಮೈಸೂರು ಜೈಲಿನಲ್ಲಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ ವಿರುದ್ಧ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಮ್ಮ ಕೆಲಸಗಳಿಗೆ ಮರೀಗೌಡ ಅಡ್ಡಿ ಪಡಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ದೂರು ನೀಡಿದ್ದರು. ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ಮರೀಗೌಡ ಅವರು ತಲೆಮರೆಸಿಕೊಂಡಿದ್ದರು. ಒಂದು ತಿಂಗಳ ಬಳಿಕ ಬುಧವಾರ ಪೊಲೀಸರು ಮುಂದೆ ಶರಣಾಗಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಅವರು ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.