ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ
ಮೈಸೂರು, ಮಾರ್ಚ್ 16 : ಎರಡು ರಾಷ್ಟ್ರೀಯ ಪಕ್ಷಗಳು ಜಿದ್ದಾ ಜಿದ್ದಿನಿಂದ ಉಪಚುನಾವಣೆ ಎದುರಿಸುತ್ತಿವೆ. ಆದ್ರೆ ಹಣಕಾಸಿನ ತೊಂದರೆಯಿಂದ ಜೆಡಿಎಸ್ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವೆಂದು ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಹೇಳಿದ್ದಾರೆ. ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಜೆಡಿ ಎಸ್ ಅಭ್ಯರ್ಥಿ ಯಾರು ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯವದವರೊಂದಿಗೆ ಮಾತನಾಡಿ, ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಬರಲಿದ್ದು, ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರಲ್ಲಿ ಅರ್ಥವಿಲ್ಲ. ಜೊತೆಗೆ ಎರಡು ರಾಷ್ಟ್ರೀಯ ಪಕ್ಷಗಳು ಜಿದ್ದಾಜಿದ್ದಿನಿಂದ ಉಪಚುನಾವಣೆ ಎದುರಿಸುತ್ತಿದ್ದು, ನಮಗೆ ಹಣಕಾಸಿನ ಶಕ್ತಿಯಿಲ್ಲ, ಆದ್ದರಿಂದ ಎರಡು ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲವೆಂದು ತಿಳಿಸಿದರು. ಈ ಉಪಚುನಾವಣೆಯನ್ನೇ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಅದು ಎರಡು ರಾಜಕೀಯ ಪಕ್ಷಗಳ ಭ್ರಮೆ ಅಷ್ಟೇ ಎಂದು ವ್ಯಂಗ್ಯವಾಡಿದರು.[ಉಪಚುನಾವಣೆ: ಚುನಾವಣಾಧಿಕಾರಿಯಾಗಿ ಜೆ.ಜಗದೀಶ್ ನೇಮಕ]
ಉಪಚುನಾವಣೆಯಲ್ಲಿ ಜೆಡಿಎಸ್ ಯಾರಿಗೂ ಬೆಂಬಲ ನೀಡುವುದಿಲ್ಲ, ನಾವು ತಟಸ್ಥವಾಗಿರುತ್ತೇವೆ ಎಂದು ತಿಳಿಸಿದ ದೇವೇಗೌಡರು, ದೇಶದ ಇಂದಿನ ಚುನಾವಣೆಗಳಲ್ಲಿ ಅಕ್ರಮ ತಡೆಯಲು ಸಾಧ್ಯವಿಲ್ಲ. ಇತ್ತೀಚಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೋದಿ ಹಣ ಖರ್ಚು ಮಾಡಿ ಗೆಲ್ಲಲಿಲ್ಲ ಎಂಬುದನ್ನ ಮೋದಿಯೇ ಸತ್ಯ ಹೇಳಲಿ ಎಂದು ಸವಾಲು ಹಾಕಿದ್ರು.[ಇದು ಪ್ರಚಾರವೋ, ವಿಜಯೋತ್ಸವವೋ ಗೊತ್ತಾಗುತ್ತಿಲ್ಲ: ಬಿ.ಎಸ್.ವೈ]
ಜೆಡಿಎಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಬಿ.ಎಸ್ ಯಡಿಯೂರಪ್ಪ ಹೇಳಿಕೆ ಊಹಾಪೋಹವಷ್ಟೆ. ನಿನ್ನೆ ಜೆಡಿಎಸ್ ನೂತನ ಕಚೇರಿ ಜೆ.ಪಿ ಭವನ ಉದ್ಘಾಟನೆಯ ಪೂಜೆಯಲ್ಲಿ ದಿನವಿಡಿ ಇದ್ದುದರಿಂದ ಬಜೆಟ್ ಏನಾಗಿದೆ ಎಂಬ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಬಜೆಟ್ ಹಾಗೂ ರೈತರ ಸಾಲ ಮನ್ನಾ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳೂಂದಿಗೆ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದೂ ತಿಳಿಸಿದರು.