ಮತ್ತೊಮ್ಮೆ ಸಿಎಂ ಆಗೋಕೆ ಅವಕಾಶ ಕೊಡಿ: ಹೆಚ್ಡಿಕೆ
ಮೈಸೂರು, ಜನವರಿ,12: 'ಹಳ್ಳಿಗೆ ಬಂದಾಗ ಮನೆ ಮಗನಂತೆ ಉಪಚರಿಸುತ್ತೀರಾ, ಆದರೆ ಮತ ಹಾಕುವಾಗ ಮರೆತು ಬಿಡುತ್ತೀರಾ. ದಯವಿಟ್ಟು ಹಾಗೆ ಮಾಡಬೇಡಿ, ನಮಗೆ ಅಧಿಕಾರ ಕೊಟ್ಟು ನೋಡಿ ನಿಮ್ಮ ಕಷ್ಟ ಸುಖಕ್ಕೆ ಸ್ಪಂದಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಿ' ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜನರ ಮುಂದೆ ಗೋಗರೆಯುತ್ತಿದ್ದಾರೆ.
ತಿ.ನರಸೀಪುರ ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಗರ್ಗೇಶ್ವರಿ ಜಿ.ಪಂ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿದ ವಿವಿಧ ಸಮುದಾಯಗಳ ಮುಖಂಡರನ್ನು ಬರಮಾಡಿಕೊಂಡು ಅವರು ಮಾತನಾಡಿದರು.[ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ ದೇವೇಗೌಡ, ಕುಮಾರಸ್ವಾಮಿ?]
ಮುಂದಿನ ದಿನಗಳಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಜನರ ನೋವು ನಲಿವುಗಳನ್ನು ಅರಿಯುತ್ತೇನೆ. ಸಿಎಂ ತವರು ಕ್ಷೇತ್ರದಿಂದಲೇ ಜೆಡಿಎಸ್ ಗೆ ರಾಜಕೀಯ ಶಕ್ತಿ ತುಂಬುವ ಕೆಲಸ ನೀವು ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಮುಂಬರುವ ಜಿ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಡಿ. ಅಷ್ಟೇ ಅಲ್ಲ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆಯೂ ಕೋರಿದರು.[ಮೈಸೂರು ರೈತರಿಗೆ ಯಾವುದೇ ಸೌಲಭ್ಯವಿಲ್ಲ, ಗೋಳು ಕೇಳೋರಿಲ್ಲ!]
ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವನ್ನೇ ಟಾರ್ಗೆಟ್ ಮಾಡಿರುವ ಕುಮಾರ ಸ್ವಾಮಿ ಅವರು ಆ ಮೂಲಕ ಜೆಡಿಎಸ್ ನ್ನು ಬಲಿಷ್ಠಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಮತದಾರರು ಜೆಡಿಎಸ್ ನ್ನು ಯಾವ ರೀತಿ ಸ್ವೀಕರಿಸುತ್ತಾರೆ? ಮತ್ತೆ ಕುಮಾರ ಸ್ವಾಮಿಯವರು ಮುಖ್ಯಮಂತ್ರಿ ಆಗುವ ಕನಸು ನನಸಾಗುತ್ತಾ ಎಂಬುದನ್ನು ಮುಂದಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಹೇಳಲಿದೆ.