ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥ್ ಜೊತೆ ಸುತ್ತೂರು ಶ್ರೀಗಳನ್ನು ಭೇಟಿಯಾದ ಹೆಚ್ಡಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 16 : ಅನಾರೋಗ್ಯದಿಂದ ಬಳಲುತ್ತಿದ್ದ ಹೆಚ್ಡಿಕೆ ಸಿಂಗಾಪುರಿಂದ ಮೈಸೂರಿಗೆ ಆಗಮಿಸಿದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತೆರಳಿದ ಅವರು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಎಚ್ ಡಿಕೆ ಆರೋಗ್ಯದಲ್ಲಿ ಏರುಪೇರು, ಸಿಂಗಾಪುರದಲ್ಲಿ ಚಿಕಿತ್ಸೆ ಎಚ್ ಡಿಕೆ ಆರೋಗ್ಯದಲ್ಲಿ ಏರುಪೇರು, ಸಿಂಗಾಪುರದಲ್ಲಿ ಚಿಕಿತ್ಸೆ

ಶ್ರೀಗಳನ್ನು ಭೇಟಿಯಾದ ಕುಮಾರಸ್ವಾಮಿಯವರು ಹಲವು ವಿಷಯಗಳ ಕುರಿತು ಸಲಹೆಯನ್ನು ಪಡೆದರು. ಈ ಸಂದರ್ಭ ಮಾಜಿ ಸಂಸದ ಹೆಚ್.ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಕುಮಾರಸ್ವಾಮಿಯವರ ಜೊತೆಗಿದ್ದರು. ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಜೆಡಿಎಸ್ ಸಭೆ ನಡೆಯಲಿದ್ದು, ಚಾಮರಾಜಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಅಂತಿಮ ಆಯ್ಕೆಯ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

JDS state president HD Kumaraswamy met Swamiji of Suttur math

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡ ನಡುವೆ ತೀವ್ರ ಪೈಪೋಟಿಯಿದ್ದು, ಯಾರಿಗೆ ಚಾಮರಾಜಕ್ಷೇತ್ರದ ಅಭ್ಯರ್ಥಿಯ ಪಟ್ಟ ಒಲಿಯಲಿದೆ ಎನ್ನುವುದು ಇಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಜೆಡಿಎಸ್ ನ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯದ ಜನತೆಗೆ ಜೆಡಿಎಸ್ ಅನಿವಾರ್ಯ

ರಾಜ್ಯದಲ್ಲಿ ಎರಡೂ ರಾಜಕೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ. ಹದಿನೈದು ದಿನಗಳ ಬಳಿಕ ರಾಜಕೀಯದ ಬಗ್ಗೆ ಸಮಗ್ರ ಚರ್ಚೆ. ರಾಜ್ಯದ ಮುಂದೆ ರಾಜ್ಯದ ಸ್ಥಿತಿ ಬಗ್ಗೆ ಕೆಲವು ಪ್ರಶ್ನೆ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪೇಂದ್ರ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅವರಿಗೆ ಶುಭವಾಗಲಿ. ನಾನು ಉಪೇಂದ್ರ ಪಕ್ಷ ಕಟ್ಟುವ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಉಪೇಂದ್ರ ಸಲಹೆ ಕೇಳಿದರೆ ಕೋಡುತ್ತೀನಿ ಅಷ್ಟೇ. ಅಮಿತ್ ಶಾ ಆದಿಚುಂಚನಗಿರಿ ಶ್ರೀಗಳ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತ ವಿಚಾರವಾಗಿ ಈಗಾಗಲೇ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ ಹೀಗಾಗಿ ನಾನು ಮಾತನಾಡುವುದಿಲ್ಲ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೆಮ್ಮು ಕಫಾ ಇದೆ ಅಷ್ಟೇ. ವೈದ್ಯರ ಸಲಹೆ ಪಡೆಯಲು ಸಿಂಗಾಪುರ್ ಗೆ ತೆರಳಿದ್ದೆ ಅಷ್ಟೇ. ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಬಂಡಾಯ ಶಾಸಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಅವರು ಯಾವ ಪಕ್ಷಕ್ಕೆ ಬೇಕಾದರು ಹೋಗಲಿ. ಎಂ.ಎಲ್.ಸಿ. ರಾಮಕೃಷ್ಣ ಕೂಡ ಬಂಡಾಯ ಶಾಸಕರ ಗುಂಪಿನಲ್ಲಿದ್ದಾರೆ. ಇದೀಗಾ ಅವರದ್ದು ಮುಗಿದ ಅಧ್ಯಾಯ. ಈ ಪಕ್ಷದಲ್ಲಿ ಸಾಕಷ್ಟು ಮಂದಿ ಬೆಳೆದಿದ್ದಾರೆ. ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ದೊಡ್ಡ ಹಂತಕ್ಕೆ ಬೆಳೆಯಲಿದೆ. ಪ್ರಜ್ವಲ್ ರೇವಣ್ಣ ರಾಜರಾಜೇಶ್ವರಿ ನಗರದಲ್ಲಿ ಸುತ್ತಾಡುತ್ತಿರುವ ಬಗ್ಗೆ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದನ್ನ ಪಕ್ಷದ ಸಭೆಯಲ್ಲಿ ಮಾತಾಡಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಐಟಿ ರೆಡ್ ಅನ್ನೋದು ಪ್ರಜಾಪ್ರಭುತ್ವದಲ್ಲಿ ಸಹಜ ಪ್ರಕ್ರಿಯೆ. ಐಟಿ ಅಧಿಕಾರಿಗಳು ರೆಡ್ ಮಾಡಬೇಕಿದ್ದರೆ ಯಾರೂ ಪ್ರಧಾನಿಗಳ ಅಥವಾ ಗೃಹ ಇಲಾಖೆ ಗಮನಕ್ಕೆ ತರಲ್ಲ. ರೆಡ್ ಆದ ಮೇಲೆ ಬೇಕಾಂದ್ರೆ ತಮ್ಮನ್ನು ಉಳಿಸಿಕೊಳ್ಳಲು ಪ್ರಧಾನಿ ಬಳಿ ಹೋಗ್ತಾರೆ. ಈಗಿರೋ ನಾಯಕರಲ್ಲಿ ಯಾರು ಅಷ್ಟು ಪ್ರಭಾವ ಇದಾರೋ ಗೊತ್ತಿಲ್ಲ. ನನಗೂ ಸಂಸದನಾಗಿ ಸಾಕಷ್ಟು ಅನುಭವ ಇದೆ ಎಂದಿದ್ದಾರೆ.

ಧಾರಕಾರ ಮಳೆಯಿಂದಾಗಿ ಬೆಂಗಳೂರಿನಲ್ಲಾಗಿರುವ ಅವಾಂತರ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಮಳೆ ಬಂದರೆ ಬಿಬಿಎಂಪಿ ಏನ್ ಮಾಡೋಕೆ ಸಾಧ್ಯ ಅಂತಾ ಜಾರ್ಜ್ ಹೇಳ್ತಾರೆ.

ನಿಮ್ಮ ಹತ್ರ ಇರೋ ಹಣಾನೇ ಸಾಕು ಅದೆ ಐದು ತಲೆಮಾರು ಕುಳಿತು ತಿನ್ನುವಷ್ಟಿದೆ. ಹಣ ಮಾಡೋದನ್ನು ನಿಲ್ಲಿಸಿ ಬೆಂಗಳೂರು ಅಭಿವೃದ್ಧಿ ಪಡಿಸಿ. ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಅಂದರೆ ಸರ್ಕಾರ ಯಾಕೆ ನಡೆಸ್ತಿದ್ದೀರಿ. ಅಧಿಕಾರ ಬಿಟ್ಟು ತೊಲಗಿ. ಬಿಬಿಎಂಪಿಯವರು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಾಗ ಕೋಟಿ, ಎರಡು ಕೋಟಿ ಹಣ ಫಿಕ್ಸ್ ಮಾಡಿರ್ತಾರೆ ಅಂಥ ಅಧಿಕಾರಿಗಳು ನಿಮ್ಮ ಮಾತು ಎಲ್ಲಿ ಕೇಳ್ತಾರೆ. ಸರ್ಕಾರಕ್ಕೆ ಯೋಗ್ಯತೆ ಇಲ್ಲದಂತಾಗಿದೆ. ಜನರ ಸಮಸ್ಯೆಗಳು ಬಗೆಹರಿಯಬೇಕಿದ್ದರೆ ಮೊದಲು ಕಾಂಗ್ರೆಸ್, ಬಿಜೆಪಿಗೆ ಮತ ಹಾಕುವುದನ್ನು ನಿಲ್ಲಿಸಬೇಕು. ಮೊದಲು ಜನ ಬುದ್ಧಿವಂತರಾಗಬೇಕು ಎಂದು ಹೇಳಿದ್ದಾರೆ.

ಉಪೇಂದ್ರ ಪಕ್ಷ ಚಿತ್ರಾನ್ನವಾಗದಿರಲಿ: ವಿಶ್ವನಾಥ್

ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಆಲೋಚನೆಗೆ ಸ್ವಾಗತ. ಆದರೆ ಉಪೇಂದ್ರ ಹೊಸ ಪಕ್ಷ ಅವರ ಚಿತ್ರದ ಹಾಡಿನ ರೀತಿ ಚಿತ್ರಾನ್ನ ಆಗದಿರಲಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದರು. ಸುತ್ತೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸೇವೆ ಮಾಡಲೇ ರಾಜಕೀಯಕ್ಕೆ ಬರೋದು. ಅದರಲ್ಲಿ ಏನು ಹೊಸದಿಲ್ಲ. ಉಪೇಂದ್ರ ಬಟ್ಟೆ ಬದಲಾಗಿರಬಹುದು ಆದರೆ ವ್ಯಕ್ತಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

English summary
JDS state president HD Kumaraswamy met Shivaratri Deshikendra Swamiji of Suttur math today. After that a meeting for JDS leaders will be organised in a private Hotel Mysuru. Candidate for Chamarajanagar assembly constituency will be likely to announced today(Aug16th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X