ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಕಿಡಿ ಭುಗಿಲೆದ್ದಿದ್ದೇಕೆ?
ಮೈಸೂರು, ಫೆಬ್ರವರಿ,10: ಚುನಾವಣೆ ಬಂದಾಗ ರಾಜಕೀಯ ಪಕ್ಷಗಳ ನಡುವೆ ಮಾರಾಮಾರಿ ನಡೆಯುವುದೇನೂ ಹೊಸದಲ್ಲ. ಆದರೆ ಹೆಚ್.ಡಿ.ಕೋಟೆಯಲ್ಲಿ ಇದಕ್ಕೆಲ್ಲ ಅಪವಾದ ಎಂಬಂತೆ ಸ್ವಪಕ್ಷದವರೇ ಮಾರಾಮಾರಿ ನಡೆಸಿ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದ್ದಾರೆ.
ಹೆಚ್.ಡಿ.ಕೋಟೆಯಲ್ಲಿ ಜೆಡಿಎಸ್ ಹವಾ ಇದೆ. ಆದರೆ ಇತ್ತೀಚೆಗೆ ಜೆಡಿಎಸ್ ಗೆ ಟಾಂಗ್ ಕೊಟ್ಟು ತಮ್ಮ ಪಕ್ಷದ ಪ್ರಾಬಲ್ಯಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಹೋರಾಡುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದ ಮುಖಂಡರೇ ಹೊಡೆದಾಡಿಕೊಂಡು ಪಕ್ಷದ ಕಚೇರಿ ಮತ್ತು ನಾಯಕರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿರುವುದು ಜೆಡಿಎಸ್ ಪಕ್ಷದಲ್ಲಿ ಮುಖಂಡರ ಮಾತಿಗೆ ಕಿಮ್ಮತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಹೆಚ್.ಡಿ.ಕೋಟೆಯ 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಒಂದಾದ ಹಂಪಾಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅದರಲ್ಲೂ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ವಿ.ನಾಗರಾಜ್ ಮತ್ತು ರಾಜೇಂದ್ರರವರ ನಡುವೆ ಟಿಕೆಟ್ ಗಾಗಿ ಕಸರತ್ತು ಮುಂದುವರೆದಿತ್ತು.[ಶನಿವಾರ ಹೆಬ್ಬಾಳ ಉಪ ಚುನಾವಣೆ, ಮತ ಹಾಕಲು ಸಿದ್ಧವಾಗಿ]
ಅಷ್ಟರಲ್ಲೇ ಮಾಜಿ ಸಚಿವ ರೇವಣ್ಣ ಅವರ ಮೂಲಕ ಮತ್ತೋರ್ವ ಆಕಾಂಕ್ಷಿ ಮೈಮುಲ್ ನಿರ್ದೇಶಕ ಈರೇಗೌಡರು ಪಕ್ಷದ ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾದರು. ಇದು ಟಿಕೆಟ್ ವಂಚಿತರಾದ ಸಿ.ವಿ. ನಾಗರಾಜ್ ಮತ್ತು ರಾಜೇಂದ್ರ ಅವರ ಅಭಿಮಾನಿಗಳನ್ನು ಕೆರಳಿಸಿತು. ಇದನ್ನು ಖಂಡಿಸಿ ಪ್ರತಿಭಟನೆಗೂ ಮುಂದಾದರು. ಇಲ್ಲಿದೆ ಇನ್ನಷ್ಟು ಮಾಹಿತಿ.
ಸಿ.ವಿ ನಾಗರಾಜ್ ಅಭಿಮಾನಿಗಳು ಕೆರಳಲು ಕಾರಣವೇನು?
ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನೇತೃತ್ವದಲ್ಲಿ ಮುಖಂಡರ ಸಭೆ ನಡೆದು ವರಿಷ್ಠರ ಮನವೊಲಿಸಿ ಜೆಡಿಎಸ್ ಅಧ್ಯಕ್ಷ ಸಿ.ವಿ.ನಾಗರಾಜ್ ಗೆ ಬಿ ಫಾರಂ ನೀಡಲಾಗಿತ್ತು. ಇವರಿಗೆ ಬೇಕಾಗಿದ್ದ ಸಿ ಫಾರಂನ್ನು ನಾಮಪತ್ರ ಪರಿಶೀಲನೆ ದಿನದಂದು ಫ್ಯಾಕ್ಸ್ ಮೂಲಕ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಾಮಪತ್ರ ಪರಿಶೀಲನೆ ದಿನವಾದ ಮಂಗಳವಾರ ಸಿ.ವಿ. ನಾಗರಾಜ್ ಬದಲು ಮೈಮುಲ್ ನಿರ್ದೇಶಕ ಈರೇಗೌಡರಿಗೆ ಫ್ಯಾಕ್ಸ್ ಮೂಲಕ ಸಿ ಫಾರಂ ನೀಡಿರುವುದು ನಾಗರಾಜ್ ಅವರ ಅಭಿಮಾನಿಗಳನ್ನು ಕೆರಳಿಸಿತ್ತು.
ಸಿ.ವಿ ನಾಗರಾಜ್ ಅಭಿಮಾನಿಗಳು ಮಾಡಿದ್ದೇನು?
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣದಲ್ಲಿ ಜೆಡಿಎಸ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಅತಿರೇಕಕ್ಕೆ ತಿರುಗಿ ಅಲ್ಲಿದ್ದ ಪಿಠೋಪಕರಣಗಳನ್ನು ಒಡೆದುಹಾಕಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾವಚಿತ್ರಗಳನ್ನು ಹರಿದು ಬಿಸಾಡಿದರು.
ಯಾರಿಂದ ಭಾರೀ ಅನಾಹುತ ತಪ್ಪಿತು?
ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾವಚಿತ್ರಗಳನ್ನು ಹರಿದು ಬಿಸಾಡಿದರೂ ತೃಪ್ತಿಯಾಗದೆ ಪಿಠೋಪಕರಣಗಳಿಗೆ ಬೆಂಕಿ ಹಾಕಿ ಕಿಟಕಿ ಗಾಜುಗಳನ್ನು ಪುಡಿಗಟ್ಟಿ, ಅಧ್ಯಕ್ಷರ ಪ್ರತ್ಯೇಕ ಕೊಠಡಿಯನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ.
ಸಿ.ವಿ ನಾಗರಾಜ್ ಮಾಧ್ಯಮದವರಿಗೆ ಹೇಳಿದ್ದೇನು?
ಸಿ.ವಿ.ನಾಗರಾಜ್ ಮಾಧ್ಯಮದವರ ಜೊತೆ ಮಾತನಾಡಿ ಪಕ್ಷದ ವರಿಷ್ಠರು ಸಿ ಫಾರಂ ಕೊಡುವುದಾಗಿ ಹೇಳಿ ಬಿ ಫಾರಂ ನೀಡಿದ್ದರು. ಆದರೆ ಮೋಸ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದರು. ಇದರಿಂದ ನೊಂದ ಇವರ ಅಭಿಮಾನಿಗಳು ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಬೆಂಬಲ ನೀಡಿ ಜೈಕಾರ ಮೊಳಗಿಸಿದರು. ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು ಜೆಡಿಎಸ್ ಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.