ಮೈಸೂರು ಮಹಾನಗರ ಪಾಲಿಕೆ: ಎರಡನೇ ಬಾರಿಗೆ ಜೆಡಿಎಸ್-ಬಿಜೆಪಿ ದೋಸ್ತಿ
ಮೈಸೂರು, ಡಿಸೆಂಬರ್. 07 : ಮೈಸೂರು ಜಿಲ್ಲಾ ಪಂಚಾಯಿತಿ ಗದ್ದುಗೆಯನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಕೈತಪ್ಪಿದೆ. ಕಳೆದ ವರ್ಷ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು ಯಶಸ್ವಿಯಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಈ ಬಾರಿಯೂ ಎರಡನೇ ಬಾರಿಗೆ ದೋಸ್ತಿ ಮುಂದುವರೆಸಿವೆ. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಬುಧವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕೈಜೋಡಿಸಿದ್ದು, ಮೇಯರ್ ಆಗಿ ಜೆಡಿಎಸ್ ನ ಎಂ.ಜೆ.ರವಿಕುಮಾರ್ (ಚಿನ್ನಿ ರವಿ) ಹಾಗೂ ಉಪಮೇಯರ್ ಆಗಿ ಬಿಜೆಪಿಯ ರತ್ನ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದೆಂಬ ಹಠಕ್ಕೆ ಬಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೊನೆಗಳಿಗೆಯಲ್ಲಿ ತಂತ್ರ ರೂಪಿಸಿದ್ದು, ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ತಂದೊಡ್ಡಿದೆ.
35ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ 73 ಮತಗಳಲ್ಲಿ 42 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾದರು. ಇನ್ನು ಬಿಜೆಪಿಯ ರತ್ನ ಲಕ್ಷ್ಮಣ್ ಅವರು ಉಪ ಮೇಯರ್ ಆಗಿ ಅವರು ಆಯ್ಕೆಯಾದರು.
ರವಿಕುಮಾರ್ ಅವರು ಪ್ರತಿಸ್ಪರ್ಧಿ ಜಗದೀಶ್ ಅವರಿಗಿಂತ 12 ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದರು. ರವಿಕುಮಾರ್ 42 ಮತಗಳನ್ನು ಪಡೆದರೆ ಜಗದೀಶ್ 30 ಮತಗಳನ್ನು ಪಡೆದರು.
ರವಿಕುಮಾರ್ ಮತ್ತು ರತ್ನ ಲಕ್ಷ್ಮಣ್ ಪರವಾಗಿ ಶಾಸಕ ಟಿ.ಟಿ. ದೇವೇಗೌಡ, ಎಮ್ ಎಲ್ ಸಿಗಳಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಸಂದೇಶ್ ನಾಗರಾಜ್, ಸಂಸದ ಪ್ರತಾಪ್ ಸಿಂಹ ಮತ್ತು 37 ಪಾಲಿಕೆ ಸದಸ್ಯರು ಮತ ಚಲಾಯಿಸಿದ್ದರು.
ಕಾಂಗ್ರೆಸ್ ನ ಜಗದೀಶ್ ಪರ 30 ಮತಗಳು ಚಲಾವಣೆಯಾಗಿದ್ದು, ಸಚಿವ ತನ್ವೀರ್ ಸೇಠ್ ಶಾಸಕರಾದ ವಾಸು ಸೋಮಶೇಖರ್ ಎಂಎಲ್ ಸಿ ಧರ್ಮಸೇನಾ ಅವರ ಮತಗಳು ಸೇರಿದಂತೆ 30 ಮತಗಳು ಚಲಾವಣೆಯಾಗಿವೆ.
ವಾರ್ಡ್-1ರ ಬಿಜೆಪಿ ಸದಸ್ಯ ಬಿ.ವಿ. ಮಂಜುನಾಥ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲೂ ಇತರರ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದರು. ಕಳೆದ ಬಾರಿ ಮೇಯರ್ ಚುನಾವಣೆ ವೇಳೆ ಅನಿರೀಕ್ಷಿತ ಎಂಬಂತೆ ಕೆಜೆಪಿಯಿಂದ ಜಯಗಳಿಸಿದ್ದ ಬಿ.ಎಲ್. ಭೈರಪ್ಪ ಮೇಯರ್ ಆಗಿದ್ದರು. ರವಿಕುಮಾರ್ ಅವರು ಉಪಮೇಯರ್ ಆಗಿದ್ದರು.