ಇವರು ಪಕ್ಷವನ್ನು ಕೆಡವುತ್ತಾರೋ, ಕಟ್ಟುತ್ತಾರೋ? ವಿಶ್ವನಾಥ್
ಕೆಪಿಸಿಸಿ ನಿಜಕ್ಕೂ ಕಾಂಗ್ರೆಸ್ ಅನ್ನು ಕಟ್ಟುತ್ತಿದೆಯಾ ಅಥವಾ ಕೆಡವುತ್ತಿದೆಯಾ ಎಂದು ಮಾಜಿ ಸಂಸದ ವಿಶ್ವನಾಥ್ ಕೆಪಿಸಿಸಿಯನ್ನು ಪ್ರಶ್ನಿಸಿದ್ದಾರೆ.
ಮೈಸೂರು, ಮಾರ್ಚ್ 25 : ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನು ತರಾತುರಿಯಲ್ಲಿ ಬದಲಾವಣೆ ಮಾಡಲಾಗಿದೆ. ಚುನಾವಣಾ ಸಂದರ್ಭದಲ್ಲಿ ಅಗತ್ಯವೇನಿತ್ತು, ಇವರೇನು ಕಾಂಗ್ರೆಸ್ ಕಟ್ಟುತ್ತಿದ್ದಾರಾ ಅಥವಾ ಕೆಡವುತ್ತಿದ್ದಾರಾ ಎಂದು ಮಾಜಿ ಸಂಸದ ವಿಶ್ವನಾಥ್ ಕೆಪಿಸಿಸಿಯನ್ನು ಪ್ರಶ್ನಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, 'ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನು ನನ್ನ ಜೊತೆ ಓಡಾಡಿದ್ದರು ಅನ್ನೋ ದ್ವೇಷಕ್ಕೆ ತೆಗೆದಿರಬಹದು. ಅಥವಾ ಕಾಂಗ್ರೆಸ್ ಆಸ್ತಿ ಕಬಳಿಸಲು ರವಿಶಂಕರ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ತೆಗೆದಿರಬಹುದು. ಮೈಸೂರು-ಚಾಮರಾಜನಗರದಲ್ಲಿ ಕಾಂಗ್ರೆಸ್ ಸಂಬಂಧವಾಗಿ ಏನೇ ಆದರೂ ಅದು ಮುಖ್ಯಮಂತ್ರಿಗಳ ಗಮನಕ್ಕೆ ಬರಲಿದೆ. ಎಐಸಿಸಿಯೂ ಮುಖ್ಯಮಂತ್ರಿಗಳಿದ್ದಾರೆ ಎನ್ನುವ ಕಾರಣಕ್ಕೆ ಮೈಸೂರಿನತ್ತ ತಲೆ ಹಾಕುತ್ತಿಲ್ಲ. ಮುಖ್ಯಮಂತ್ರಿಗಳೇ ನೀವು ಸರ್ಕಾರವನ್ನು ಹೇಗೆ ಬೇಕಾದರೂ ಹಾಳು ಮಾಡಿ. ಆದರೆ 130 ವರ್ಷದ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಬೇಡಿ" ಎಂದು ಗುಡುಗಿದ್ದಾರೆ.[ಈ ಬಾರಿ ಯಾರಿಗೆ ಸಿಗಲಿದೆ ನಂಜುಂಡೇಶ್ವರ ಪ್ರಸಾದ ?]
ದೆಹಲಿಯಲ್ಲಿ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗರು ಇದ್ದಾರೆ. ಕರ್ನಾಟಕ ದುರ್ದೈವ ಎಂದರೆ ಅವರೆಲ್ಲರೂ ಮುಖ್ಯಮಂತ್ರಿಗಳಿಗೆ ಹೆದರುವಂತೆ ಕಾಣುತ್ತಿದೆ. ರಾಜ್ಯದಲ್ಲಿ ಏನು ಆದರೂ ಯಾರು ಮಾತನಾಡುತ್ತಿಲ್ಲ. ಕಾಂಗ್ರೆಸ್ ನಾಯಕರೇ ನೀವು ಹೋದರೂ ಪಕ್ಷವಿರುತ್ತೆ ಅನ್ನೋದನ್ನು ಮರೆಯಬೇಡಿ ಎಂದು ಎಚ್.ವಿಶ್ವನಾಥ್ ಪತ್ರಿಕಾ ಗೋಷ್ಠಿ ವೇಳೆ ಹೇಳಿದ್ದಾರೆ.[ಮಾ. 27 ರಂದು ಗುಂಡ್ಲುಪೇಟೆಗೆ ಕೃಷ್ಣಾಗಮನ!]
ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಆಸ್ತಿ ಕಬಳಿಕೆಗೆ ಹುನ್ನಾರ ನಡೆದಿದೆ. ನಮ್ಮ ಪಕ್ಷದ ಕೆಲ ನಾಯಕರೇ ಇದನ್ನು ಟ್ರಸ್ಟ್ ಮೂಲಕ ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ. ಜೆ.ಎಲ್.ಬಿ ರಸ್ತೆಯಲ್ಲಿರುವ ಆಸ್ತಿ ಮೌಲ್ಯ ಕೋಟಿ ದಾಟಿದೆ. ಅದನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ನಮ್ಮ ಕಾಂಗ್ರೆಸ್ ಮುಖಂಡರು ಆ ಟ್ರಸ್ಟ್ ನ ಸದಸ್ಯರಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಲಿದೆ. ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಕಾಂಗ್ರೆಸ್ನಲ್ಲಿ ಏನಾಗುತ್ತಿದೆ ಎನ್ನುವುದನ್ನು ಸೋನಿಯಾ ಗಾಂಧಿಯವರಿಗೆ ತಿಳಿಸಬೇಕಿದೆ. ಅಲ್ಲಿ ತಿಳಿಸುವವರಿದ್ದರೂ ಬೇರೆ ರೀತಿ ತಿಳಿಸುತ್ತಿದ್ದಾರೆ .ಇವೆಲ್ಲವನ್ನು ತಿಳಿಸುವ ಸಲುವಾಗಿ ಸೋನಿಯಾರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.[ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ]
ಸೋನಿಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿರುವ ಎಚ್.ವಿಶ್ವನಾಥ್ ಅವರು ರಾಜ್ಯ ಹಾಗೂ ಕೇಂದ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಅವರ ಗಮನಕ್ಕೆ ತರುತ್ತೇನೆ. ಕೇಳುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಹಿರಿಯರ ಮುಂದೆ ನಿವೇದನೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.