'ಬ್ಯಾಂಕುಗಳು ನೀಡುವ ಸಾಲ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ'
ಮೈಸೂರು, ಫೆಬ್ರವರಿ, 13 : ಬ್ಯಾಂಕುಗಳು ಕೈಗಾರಿಕೆಗಳಿಗಾಗಿ ನೀಡುವ ಸಾಲ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಎಫ್ ಕೆಸಿಸಿಐ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಹೇಳಿದರು.
ಮೈಸೂರಿನ ಇಂಜೀನಿಯರ ಸಂಸ್ಥೆ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು ಜಿಲ್ಲೆಯ ಕೈಗಾರಿಕಾ ಸಂಘಗಳ ಆಶ್ರಯದಲ್ಲಿ ಭಾವಿ ರಫ್ತುದಾರರಿಗೆ 6 ದಿನ ಹಮ್ಮಿಕೊಳ್ಳಲಾದ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಇಂದು ಕೈಗಾರಿಕೋದ್ಯಮ ಬೃಹತ್ತಾಗಿ ಬೆಳೆಯುತ್ತಿದೆ. ಸರ್ಕಾರದಿಂದ ಸಾಲ ಸೌಲಭ್ಯಗಳು ಲಭಿಸುತ್ತಿವೆ. ಎಲ್ಲವನ್ನೂ ಜನತೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಸಣ್ಣ ಕೈಗಾರಿಕೆಗಳಿಗೆ ಇಂದು ಹೆಚ್ಚಿನ ಮಹತ್ವ ಸಿಗುತ್ತಿದ್ದು, ಎಲ್ಲರೂ ತೊಡಗಿಸಿಕೊಳ್ಳುತ್ತಿದ್ದಾರೆ. ನಾವು ಯಾವುದೇ ಉತ್ಪಾದನೆಯನ್ನು ಜನರಿಗೆ ತಲುಪಿಸಲು ಮುಕ್ತ ಮನಸ್ಸಿನಿಂದ ಜನತೆಗೆ ಅದನ್ನು ತಿಳಿಸಿಕೊಡಬೇಕು. ಹಾಗೆ ಮಾಡಿದಲ್ಲಿ ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಇರಲಿದೆ ಎಂದು ಹೇಳಿದರು.
ಇದು ಐದನೇ ಶಿಬಿರವಾಗಿದ್ದು, 33 ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆ ಉದ್ಯಮವನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕು, ಯಾವ ರೀತಿ ಜನತೆಯನ್ನು ಸೆಳೆಯಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.