ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!
ಮೈಸೂರು, ಆಗಸ್ಟ್ 28 : ದಸರಾ ಮಹೋತ್ಸವದ ಜಂಬೂ ಸವಾರಿಯ ರೂವಾರಿಗಳಾಗಿ ಗಜಪಡೆಗಳು ಮೈಸೂರು ಅರಮನೆ ಪ್ರವೇಶಿಸಿವೆ. ಗಜಪಡೆಯ ಮೊದಲ ತಂಡದ ಆನೆಗಳ ತೂಕಪರೀಕ್ಷೆ ನಡೆಸಲಾಗಿದ್ದು, ಸದ್ಯ ಇರುವ ಆರು ಆನೆಗಳ ಪೈಕಿ ಜಂಬೂಸವಾರಿಯ ಚಿನ್ನದ ಅಂಬಾರಿ ಹೊರುವ ಅರ್ಜುನನೇ ಬಲಶಾಲಿಯಾಗಿದೆ.
ಅರ್ಜುನ ನೇತೃತ್ವದ 6 ಆನೆಗಳನ್ನು ನಗರದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೋಂ ವೇ ಬಿಡ್ಜ್ನಲ್ಲಿ ತೂಕದ ಪರೀಕ್ಷೆ ಮಾಡಲಾಗಿದ್ದು, ಅರ್ಜುನ 5,615 ಕೆಜಿ ತೂಕವಿದ್ದು ನಾನೇ ಗಜಪಡೆಯಲ್ಲಿ ಅತ್ಯಂತ ಬಲಶಾಲಿ ಎಂಬುದನ್ನು ತೋರಿಸಿದ್ದಾನೆ.[ದಸರಾ ಆನೆಗಳ ಪರಿಚಯ ಇಲ್ಲಿದೆ]
ಮುಂದಿನ ದಿನಗಳಲ್ಲಿ ಅರ್ಜುನನ ತೂಕದ ಪ್ರಮಾಣ ಇನ್ನಷ್ಟು ಹೆಚ್ಚುಗೊಳ್ಳಲಿದೆ. ಸಾವಿರ ಕೆಜಿಯಷ್ಟು ಭಾರವಿರುವ ಅಂಬಾರಿ ಹೊರಲು ಬಲಶಾಲಿಯೇ ಬೇಕಾಗಿರುವುದರಿಂದ ಅರ್ಜುನನನ್ನು ಅದಕ್ಕಾಗಿ ತಯಾರಿ ಮಾಡಲಾಗುತ್ತದೆ. ಇದೀಗ ನಡೆದ ತೂಕ ಮಾಡುವ ಕಾರ್ಯದಲ್ಲಿ ಸದ್ಯ ಇರುವ ಗಜಪಡೆಗಳ ತೂಕ ಗೊತ್ತಾಗಿದ್ದು, ಈ ತೂಕ ಪ್ರಮಾಣ ಜಂಬೂಸವಾರಿ ಕಳೆಯುವ ವೇಳೆಗೆ ಇನ್ನಷ್ಟು ಹೆಚ್ಚಾಗಲಿದೆ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]
ಇದೀಗ ತೂಕದ ಪರೀಕ್ಷೆ ನಡೆದಿದ್ದು, ಇನ್ನು ಮುಂದೆ ಗಜಪಡೆಗಳಿಗೆ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ನೀಡಬೇಕು? ಎಂಬುದರ ಬಗ್ಗೆ ಅರಣ್ಯಾಧಿಕಾರಿಗಳು ಮತ್ತು ವೈದ್ಯರು ನಿರ್ಧರಿಸಲಿದ್ದಾರೆ. ಅದರಂತೆ ಆಹಾರ ಮತ್ತು ದೈಹಿಕ ಸಾಮರ್ಥ್ಯವನ್ನು ವೃದ್ಧಿಸಲು ಬೇಕಾದ ಕಸರತ್ತುಗಳನ್ನು ಮಾಡಲಾಗುತ್ತದೆ....[ಮೈಸೂರು ಅರಮನೆಯಲ್ಲಿ ಆನೆಗಳಿಗೆ ಅದ್ಧೂರಿ ಸ್ವಾಗತ]
ಮೊದಲ ಗಜಪಡೆ ಆಗಮನ
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಮೊದಲ ತಂಡ ಮೈಸೂರು ಅರಮನೆ ಪ್ರವೇಶಿಸಿವೆ. ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ಹಾಗೂ ಕಾವೇರಿ ಆನೆಗಳೂ ಮೈಸೂರಿಗೆ ಬಂದು ತುಲುಪಿವೆ.
ಆನೆಗಳಿಗೆ ತೂಕದ ಪರೀಕ್ಷೆ
ಆನೆಗಳಿಗೆ ತೂಕದ ಪರೀಕ್ಷೆ ಮಾಡಲಾಗಿದ್ದು ಅರ್ಜುನ 5,615 ಕೆಜಿ, ಬಲರಾಮ 4,920, ಅಭಿಮನ್ಯು 4,855, ಗಜೇಂದ್ರ 4,620, ವಿಜಯ 2,635 ಹಾಗೂ ಕಾವೇರಿ 3005 ಕೆಜಿ ತೂಕ ಹೊಂದಿವೆ.
ತೂಕ ಹೆಚ್ಚಿದ್ದರೆ ಮಾತ್ರ ಸಾಲದು
ಗಜಪಡೆಗಳು ಕೇವಲ ದೈಹಿಕವಾಗಿ ಶಕ್ತಿ ಹೊಂದಿದ್ದರೆ ಸಾಲದು, ಅವು ದಸರಾಗೆ ಮಾನಸಿಕವಾಗಿಯೂ ಸಿದ್ದಗೊಳ್ಳುವಂತೆ ಮಾಡಬೇಕಾಗುತ್ತದೆ. ಲಕ್ಷಾಂತರ ಜನರ ನಡುವೆ ಗೌಜು, ಗದ್ದಲ, ಸದ್ದುಗಳಿಗೆ ಹೊಂದಿಕೊಳ್ಳುವ ಮನಸ್ಥಿತಿಯನ್ನು ಅವುಗಳಲ್ಲಿ ಬೆಳೆಸಬೇಕಾಗಿದೆ.
ಆನೆಗಳಿಗೆ ತಾಲೀಮು ಆರಂಭ
ಮೊದಲಿಗೆ ಬೆಳಗ್ಗೆ ಮತ್ತು ಸಂಜೆ ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ನಡೆಯುವ ಮೈದಾನದವರೆಗೆ ಅವುಗಳನ್ನು ಕರೆದೊಯ್ಯುವ ತಾಲೀಮು ಮಾಡಲಾಗುತ್ತದೆ. ದಿನಕಳೆದಂತೆ ತಾಲೀಮನ್ನು ಕಠಿಣಗೊಳಿಸಿ ಜಂಬೂಸವಾರಿಗೆ ಮಾನಸಿಕ, ದೈಹಿಕವಾಗಿ ಸಿದ್ಧಮಾಡಲಾಗುತ್ತದೆ.