ಕಮ್ಮನಹಳ್ಳಿ ಅಟ್ಟಹಾಸ: ಮೈಸೂರಿನಲ್ಲಿ ಪ್ರತಿಭಟನೆ
ಮೈಸೂರು, ಜನವರಿ 6: ಬೆಂಗಳೂರಿನಲ್ಲಿ ಹೊಸವರ್ಷದ ಹೊಸ್ತಿಲಲ್ಲಿ ನಡೆದ ಹೆಣ್ಣುಮಕ್ಕಳ ಮೇಲಿನ ಕಿರುಕುಳ, ದೌರ್ಜನ್ಯವನ್ನು ಖಂಡಿಸಿ ಅಖಿಲ ಭಾರತ ಡೆಮಾಕ್ರಟಿಕ್ ಯುವ ಸಂಘಟನೆ ಹಾಗೂ ಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.
ಮೈಸೂರಿನ ರಾಮಸ್ವಾಮಿ ವೃತ್ತ ಹಾಗೂ ಗಾಂಧಿ ವೃತ್ತದ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಮಾಜದ ಯಾವುದೇ ಪಿಡುಗುಗಳನ್ನು ಸಂಪೂರ್ಣ ತೊಲಗಿಸಲು ಸೃಜನಾತ್ಮಕ ಹೋರಾಟದ ಅವಶ್ಯಕತೆ ಇದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಪ್ರತಿಯೊಬ್ಬರೂ ಸಾಂಸ್ಕೃತಿಕ ಚಳವಳಿಗಳನ್ನು ಒಗ್ಗಟ್ಟಿನಿಂದ ನಡೆಸಬೇಕಿದೆ ಎಂದರು.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ದೇಶದಲ್ಲಿ ಮಹಿಳೆಯರು ಸಂಖ್ಯೆ ಕ್ಷೀಣಿಸುತ್ತಿರುವುದು ಒಂದೆಡೆಯಾದರೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ರಾಜ್ಯಕ್ಕೆ ಮುಜುಗರ ತರುವ ವಿಷಯವಾಗಿದೆ ಎಂದರು.[ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]
ರಾಜ್ಯ ಸರ್ಕಾರ ಹಾಗೂ ಗೃಹ ಮಂತ್ರಿಗಳ ವಿರುದ್ಧ ಪ್ರತಿಭಟನಾ ನಿರತರು ಧಿಕ್ಕಾರ ಕೂಗಿದರು ರಾಜ್ಯದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ವಿಡಿಯೋದಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಅನೇಕ ಪ್ರಕರಣಗಳು ಮುಚ್ಚಿ ಹೋಗಿವೆ. ಗೃಹ ಮಂತ್ರಿಗಳು ಪ್ರಕರಣದ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ. ಮುಂದೆ ಮೈಸೂರು ನಗರ ಹಾಗೂ ಬಿಜೆಪಿ ಘಟಕದಿಂದ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.