ಸೊಸೆಗಾಗಿ ಮಾವನ ಕೊಲೆಗೈದ ಹಂತಕನ ಬಂಧನ
ಮೈಸೂರು, ಅಕ್ಟೋಬರ್ 9: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಸೇರಿ ಆಕೆಯ ಮಾವನನ್ನು ಕೊಲೆಗೈದು, ಸಿಕ್ಕಿ ಬಿದ್ದು ಜೈಲು ಸೇರಿದ ಘಟನೆ ನಂಜನಗೂಡು ತಾಲೂಕಿನ ಜಿ.ಮರಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ.ಮರಹಳ್ಳಿ ಗ್ರಾಮದ ಪುಟ್ಟಸ್ವಾಮಿ (56) ಕೊಲೆಯಾದ ದುರ್ದೈವಿ. ನಾಗ ಅಲಿಯಾಸ್ ನಾಗರಾಜು, ಸುರೇಶ, ಪುಟ್ಟಸ್ವಾಮಿ, ಮಹದೇವ, ರಂಗಸ್ವಾಮಿ, ರಾಜು ಮತ್ತು ಪಾರ್ವತಿ ಬಂಧಿತರು.
ಘಟನೆಯ ವಿವರ: ಕೊಲೆಯಾದ ಪುಟ್ಟಸ್ವಾಮಿಯ ಮಗನಿಗೆ ಕೂಡನಹಳ್ಳಿಯ ಪಾರ್ವತಿಯನ್ನು ಮದುವೆ ಮಾಡಲಾಗಿತ್ತು. ಆಕೆಯ ಗಂಡ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಮಾವ, ಅತ್ತೆ ಹಾಗೂ ಮಗುವಿನೊಂದಿಗೆ ಜಿ.ಮರಹಳ್ಳಿಯಲ್ಲೇ ವಾಸವಾಗಿದ್ದಳು. ಈ ಮಧ್ಯೆ ಪಾರ್ವತಿಗೆ ನಾಗ ಅಲಿಯಾಸ್ ನಾಗರಾಜ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು.[ಆಕೆ ಸತ್ತ ಮೇಲೆ ಗೊತ್ತಾಗಿದ್ದು ಹತ್ತು ವರ್ಷದ ಗೃಹ ಬಂಧನದ ಕ್ರೌರ್ಯ]
ಅ.2ರಂದು ಇವರಿಬ್ಬರು ತೀರಾ ಆಪ್ತವಾಗಿದ್ದ ದೃಶ್ಯವೇ ಮಾವ ಪುಟ್ಟಸ್ವಾಮಿ ಕಣ್ಣಿಗೆ ಬಿದ್ದಿತು. ಮಾವನಿಗೆ ವಿಷಯ ತಿಳಿದಿದ್ದರಿಂದ ನನ್ನ ಕತೆ ಮುಗಿದಂತೆ ಎಂದು ಪಾರ್ವತಿ ಭಯಗೊಂಡಿದ್ದಳು. ಇತ್ತ ನಾಗನಿಗೂ ಭಯವಾಗಿತ್ತು. ಅಲ್ಲದೆ, ವಿಷಯ ತಿಳಿದರೆ ಊರಿನಲ್ಲಿ ಮಾನ ಹೋಗುತ್ತದೆ ಎಂದು ಆತ ಹೆದರಿದ್ದಾನೆ. ಆ ನಂತರ ಪಾರ್ವತಿಯ ಮಾವ ಪುಟ್ಟಸ್ವಾಮಿಯನ್ನು ಮುಗಿಸುವ ಸಂಚು ರೂಪಿಸಿದ್ದಾನೆ.
ತನ್ನ ಸಹಚರರಾದ ಸುರೇಶ, ಪುಟ್ಟಸ್ವಾಮಿ, ಮಹದೇವ, ರಂಗಸ್ವಾಮಿ, ರಾಜು ಎಂಬುವರಿಗೆ ಮದ್ಯ ಕುಡಿಸಿ, ಅ.3ರ ಬೆಳಗಿನ ಜಾವ ಮನೆಯಿಂದ ಹೊರಬಂದ ಪುಟ್ಟಸ್ವಾಮಿಯ ಕತ್ತು ಹಿಸುಕಿ ಕೊಲೆಗೈದು, ಸಮೀಪದ ಪೊದೆಯಲ್ಲಿ ಶವ ಎಸೆದಿದ್ದರು. ಆ ನಂತರ ಆರೋಪಿಗಳು ತಮಗೇನೂ ಗೊತ್ತಿಲ್ಲ ಎಂಬಂತೆ ಇದ್ದರು. ಆದರೆ ಕೊಲೆ ವಿಷಯವನ್ನು ಪಾರ್ವತಿಗೆ ತಿಳಿಸಿದ್ದ ನಾಗ.[ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ]
ಆ ನಂತರ ಪಾರ್ವತಿ ಮಾವ ಪುಟ್ಟಸ್ವಾಮಿಯದು ಸಂಶಯಾಸ್ಪದ ಸಾವು. ಕೊಲೆಗಾರರನ್ನು ಬಂಧಿಸಬೇಕು ಎಂದು ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಂಜನಗೂಡು ಗ್ರಾಮಾಂತರ ಠಾಣೆಯ ಸಿಐ ರವಿಕುಮಾರ್ ಅವರು ಸಿಬ್ಬಂದಿ ಚಂದ್ರಶೇಖರ್, ದೇವರಾಜು, ನಾಗರಾಜು, ಹೇಮೇಶ್, ಕೃಷ್ಣ, ಲತೀಫ್ ಅವರನ್ನೊಳಗೊಂಡ ತನಿಖಾ ತಂಡ ರಚಿಸಿ, ತನಿಖೆ ಆರಂಭಿಸಿದ್ದರು.
ಪೊಲೀಸರಿಗೆ ಸೊಸೆ ಪಾರ್ವತಿಯ ಮೇಲೆ ಸಂಶಯ ಬಂದಿತ್ತು. ಮೊಬೈಲ್ ಲೊಕೇಶನ್ ಪರಿಶೀಲಿಸಿ, ತನಿಖೆ ನಡೆಸಿದಾಗ ಪಾರ್ವತಿ- ನಾಗನ ಮಧ್ಯದ ಅನೈತಿಕ ಸಂಬಂಧ ಪತ್ತೆಯಾಗಿತ್ತು. ಹೀಗಾಗಿ ನಾಗನ ಸಹಿತ ಆರು ಮಂದಿಯನ್ನು ಬಂಧಿಸಿ ತಂದು, ವಿಚಾರಣೆ ನಡೆಸಿದಾಗ ಆರೋಪಿಗಳು ಮಾಡಿ ಕೃತ್ಯವನ್ನು ಬಾಯಿಬಿಟ್ಟಿದ್ದರು. ಇದೀಗ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.