ಪ್ರಜ್ವಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ: ದೇವೇಗೌಡ
ಮೈಸೂರು, ಜುಲೈ 10: ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು, ಪ್ರಜ್ವಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸುವುದನ್ನು ನಿನ್ನೆಗೆ ಕೊನೆಗೊಳಿಸಿದ್ದೇನೆ. ಒಂದು ಪ್ರಾದೇಶಿಕ ಪಕ್ಷವಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡಲಾಗುವುದು. ಪ್ರಜ್ವಲ್ ಹೇಳಿಕೆಯನ್ನು ಮತ್ತೆ ಮುಂದುವರಿಸುವುದು ಬೇಡ, ಇದನ್ನು ಇಲ್ಲಿಗೇ ನಿಲ್ಲಿಸೋಣ ಎಂದರು.
ಈ ವಿಚಾರವನ್ನು ಸಂಕ್ಷಿಪ್ತವಾಗಿ ನಿನ್ನೆಯೇ ಹೇಳಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೂ ಪ್ರತಿಕ್ರಿಯಿಸಲು ದೇವೇಗೌಡರು ನಿರಾಕರಿಸಿದರು. ಪ್ರಜ್ವಲ್ ನನಗೆ ನೀಡಿದ ಸ್ಪಷ್ಟೀಕರಣದಿಂದ ಸಮಾಧಾನಗೊಂಡಿದ್ದೇನೆ. ಇನ್ನು ಮುಂದೆ ಆ ವಿಚಾರವನ್ನು ಚರ್ಚಿಸುವುದು ಅನಗತ್ಯ ಎಂದರು.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡುತ್ತಿದ್ದ ಪ್ರಜ್ವಲ್ ರೇವಣ್ಣ ಅವರು, ಜೆಡಿಎಸ್ ನಲ್ಲಿ ಸೂಟ್ಕೇಸ್ ರಾಜಕೀಯ ಚಾಲ್ತಿಯಲ್ಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇನ್ನು ಮುಂದೆ ಈರೀತಿ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ದೇವೇಗೌಡರು ಪ್ರಜ್ವಲ್ ಅವರಿಗೆ ತಾಕೀತು ಮಾಡಿದ್ದರು.