ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ
Satish jarkiholi, Karnataka, Siddaramaiah, Mysuru, District news, ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ, ಮೈಸೂರು, ಜಿಲ್ಲಾಸುದ್ದಿ
ಮೈಸೂರು, ಜನವರಿ 27: ನಾನು ಜೆಡಿಎಸ್ ಸೇರುವ ವಿಚಾರ ಕೇಲವ ವಂದತಿ. ನನ್ನ ಮತ್ತು ಮುಖ್ಯಮಂತ್ರಿಗಳ ಸಂಬಂಧ ಗಟ್ಟಿಯಾಗಿಯೇ ಇದೆ. ಕಾಂಗ್ರೆಸ್ ಬಿಟ್ಟು ನಾನು ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಸಂಪುಟದಿಂದ ಹೊರಬಂದ ಮೇಲೆ ಸಮಾಜ ಸೇವೆ, ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ಗುಮಾನಿಗಳಿಗೆ ತೆರೆ ಎಳೆದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ನಾನು ಜೆಡಿಎಸ್ ಸೇರುವ ವಿಚಾರ ವದಂತಿಯಷ್ಟೇ. ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ರಮೇಶ್ ಜಾರಕಿ ಹೊಳಿಯನ್ನು ಸಚಿವ ಸ್ಥಾನದಿಂದ ಕೈ ಬಿಡುವುದು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಅಲ್ಲದೇ ನಾನು ಮತ್ತೇ ಸಚಿವ ಸ್ಥಾನ ಕೇಳಿಲ್ಲ. ಸದ್ಯಕ್ಕೆ ಈ ಬಗ್ಗೆ ಚರ್ಚೆ ಅನವಶ್ಯಕ.[ಜಾರಕಿಹೊಳಿ ಸಹೋದರರ ಮನೆ ಮೇಲೆ ಮುಂದುವರೆದ ಐಟಿ ದಾಳಿ]
ನನಗೆ ಸಚಿವ ಸ್ಥಾನದ ಬಗ್ಗೆ ಆಸೆ, ವ್ಯಾಮೋಹವಿಲ್ಲ. ಹಾಗಾಗಿ ನಾನೇ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಸಚಿವ ಸ್ಥಾನಕ್ಕೆ ಲಾಬಿ ಮಾಡಬೇಕೆಂದಿದ್ದರೆ ಏಳೂವರೆ ತಿಂಗಳ ಹಿಂದೆಯೇ ಮಾಡುತ್ತಿದ್ದೇ. ಸದ್ಯಕ್ಕೆ ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದೇ ನನ್ನ ಉದ್ದೇಶವಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.[ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ ಮಾಡಿದ ಸಿಎಂ]
ಮೌಢ್ಯ ಪ್ರತಿಬಂಧಕ ಕಾಯಿದೆ ಕುರಿತು ಮಾತನಾಡಿದ ಅವರು ಈ ಕುರಿತು ಮತ್ತಷ್ಟು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ. ಚರ್ಚೆ ಮಾಡದೇ ಅದನ್ನು ಜಾರಿಗೊಳಿಸಿದರೆ ತಪ್ಪಾಗುತ್ತದೆ ಎಂದರು. ನಮ್ಮ ಅಣ್ಣನ ಮನೆಯ ಮೇಲಿನ ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಐಟಿ ದಾಳಿ ಮಾಡುವಂತೆ ಯಾರೂ ದೂರು ನೀಡಿಲ್ಲ. ಯಾರೋ ಹೇಳುತ್ತಾರೆಂದು ಐಟಿಯವರು ದಾಳಿ ಮಾಡಲ್ಲ. ಐಟಿ ರೇಡ್ ನಲ್ಲಿ ಅಘೋಷಿತ ಆದಾಯ ಸಿಕ್ಕಿರುವ ಕುರಿತು ರಮೇಶ್ ಜಾರಕಿಹೊಳಿ ಹಾಗೂ ಲಕ್ಷೀಹೆಬ್ಬಾಳ್ಕರ್ ಅವರನ್ನೇ ಕೇಳಬೇಕು. ದಾಳಿ ರಾಜಕೀಯ ಪ್ರೇರಿತವಾಗಿತ್ತೇ ಅನ್ನೊದು ತನಿಖೆಯಿಂದ ತಿಳಿದು ಬರಬೇಕಿದೆ ಎಂದರು.