ಕೊಪ್ಪಳದಿಂದ ಸ್ಪರ್ಧಿಸುತ್ತಾರಾ ಮುಖ್ಯಮಂತ್ರಿ ಸಿದ್ದರಾಮಯ್ಯ?
2018 ರ ವಿಧಾನಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಆಸೆ ಇದೆ. ಆದರೆ ಖಚಿತ ನಿರ್ಧಾರ ಮಾಡಿಲ್ಲ, ಸಂಸತ್ ಚುನಾವಣೆಯಲ್ಲಂತೂ ಸ್ಪರ್ಧಿಸುವ ಇರಾದೆ ನನಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಮೇ 20: ಸಕ್ರೀಯ ರಾಜಕಾರಣ ಸಾಕಾಗಿದೆಯಾದರೂ ಇನ್ನೊಂದು ಚುನಾವಣೆಗೆ ನಿಲ್ಲುತ್ತೇನೆ, 2018 ರ ವಿಧಾನಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಆಸೆ ಇದೆ. ಆದರೆ ಖಚಿತ ನಿರ್ಧಾರ ಮಾಡಿಲ್ಲ, ಸಂಸತ್ ಚುನಾವಣೆಯಲ್ಲಂತೂ ಸ್ಪರ್ಧಿಸುವ ಇರಾದೆ ನನಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಅತಿಥಿ ಗೃಹವೊಂದರಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುದ್ದಿಗಾರರೊಂದಿಗೆ ಮಾತನಾಡಿದರು.['ಭಿನ್ನಾಭಿಪ್ರಾಯದ ಡ್ಯಾಮೇಜ್ ಕಂಟ್ರೋಲ್ ಗಾಗಿ ಬಿಜೆಪಿ ಜನಸಂಪರ್ಕ']
ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನನಗೆ ಆಸೆ ಇದೆ. ಆದರೆ ಈ ಬಗ್ಗೆ ಖಚಿತ ನಿರ್ಧಾರ ಮಾಡಿಲ್ಲ ಎಂದಿರುವ ಅವರು, 1991 ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸಿ 10 ಸಾವಿರ ಮತಗಳಿಂದ ಸೋತಿದ್ದನ್ನು ನೆನಪಿಸಿಕೊಂಡರು.[ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ]
ಮೂರು ವರ್ಷದಿಂದ ಕೇಂದ್ರ ಸರ್ಕಾರದ ಸಾಧನೆ ಶೂನ್ಯ. ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುತ್ತಿರುವ ಕೇಂದ್ರ ಸರ್ಕಾರದ ನಿಲುವು ಸರಿಯಿಲ್ಲ, ಅದು ಜನಸಾಮಾನ್ಯರಿಗೆ ಯಾವುದೇ ಯೋಜನೆ ನೀಡದೇ ಮಂಕು ಬುದ್ಧಿ ಎರಚುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.[ಮೀಸಲಾತಿ ಶೇ. 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ - ಸಿದ್ದರಾಮಯ್ಯ]
ಬರ ಅಧ್ಯಯನ ಒಂದು ಗಿಮಿಕ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಾಲಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿಲ್ಲ ಎಂದು ಹೇಳಿದ್ದರು. ಬಿಜೆಪಿ ಬರಗಾಲ ಅಧ್ಯಯನ ನಡೆಸುತ್ತಿರುವುದು ಒಂದು ಗಿಮಿಕ್ ಅಷ್ಟೆ. ಅದು ಒಳಗೊಂದು ಹೊರಗೊಂದು ಮಾಡುತ್ತಿದೆ. ಬರ ಅಧ್ಯಯನ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲಿ. ತೋರಿಕೆಗೋಸ್ಕರ ದಲಿತರ ಮನೆಯಲ್ಲಿ ಊಟ ಮಾಡುವ ಅಗತ್ಯವಿಲ್ಲ್ ಎಂದು ಲೇವಡಿ ಮಾಡಿದರು.
ಸಾಧನೆ ಅನುಗುಣದ ಮೇಲೆ ಟಿಕೇಟ್
ಸರ್ಕಾರದ ಬಗ್ಗೆ ಜನಾಭಿಪ್ರಾಯವೇನು ಎಂಬ ಕುರಿತು ಈಗಾಗಲೇ ಆಂತರಿಕ ಸಮೀಕ್ಷೆ ಮಾಡಿಸುತ್ತಿದ್ದೇನೆ. ಶಾಸಕರ ಸಾಧನೆಗಳ ಬಗ್ಗೆ ಸಮೀಕ್ಷೆ ಮಾಡಿಸಲಾಗುತ್ತಿದೆ. ಸಮೀಕ್ಷಾ ವರದಿ ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಚುನಾವಣೆಯಲ್ಲಿ ಟಿಕೇಟ್ ನೀಡಲಾಗುವುದು ಎಂದಿದ್ದಾರೆ.
ಸೇಡಿನ ರಾಜಕಾರಣ ಮಾಡಿಲ್ಲ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾವತ್ತೂ ಸೇಡಿನ ರಾಜಕಾರಣ ಮಾಡಿಲ್ಲ. ಸಂತೋಷ್ ಹೆಗ್ಡೆ ಅವರ ವರದಿ ಆಧರಿಸಿ ನಾವು ಎಸ್.ಐ.ಟಿ. ರಚನೆ ಮಾಡಿದ್ದೇವೆ. ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ನಾವಿದ್ದಾಗಲೇ ಜೆಡಿಎಸ್ ಎಮರ್ಜ್ ಆಗಿರಲಿಲ್ಲ. ಈಗ ಆಗಲು ಸಾಧ್ಯವೇ? ಎಂದು ಲೇವಡಿ ಮಾಡಿದರು.
ಕೆದಾರನಾಥದಲ್ಲಿರುವ ಕನ್ನಡಿಗರಿಗೆ ರಕ್ಷಣೆಯ ಭರವಸೆ
ಕೇದಾರನಾಥದಲ್ಲಿ ಕನ್ನಡಿಗರು ಸಿಲುಕಿದ್ದರೆ ಅವರನ್ನು ಸುರಕ್ಷಿತವಾಗಿ ಕರೆತರಲು ದೆಹಲಿಯಲ್ಲಿರುವ ಕರ್ನಾಟಕ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದರು.
ತಿವಾರಿ ಪ್ರಕರಣದಲ್ಲಿ ತನಿಖೆಗೆ ರಾಜ್ಯ ಸರ್ಕಾರ ಸಿದ್ಧ
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ಯಾವುದೇ ತನಿಖೆಗೂ ಸಿದ್ಧವಿದೆ. ಉತ್ತರ ಪ್ರದೇಶದ ಸಿಎಂಗೆ ಈ ಕುರಿತು ನಿನ್ನೆಯೇ ಪತ್ರ ಬರೆದಿದ್ದೇನೆ. ಆಹಾರ ಇಲಾಖೆಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿಲ್ಲ. ಅನುರಾಗ್ ತಿವಾರಿ ಅವರು ಕಿರುಕುಳದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ಕಳಲೆಕೇಶವಮೂರ್ತಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗಳ ಜೊತೆಗಿದ್ದರು.
{promotion-urls}