ಸೂರ್ಯಕಾಂತಿಯ ಈ ತೋಟದಲ್ಲಿ ಸೆಲ್ಫಿ ತಗೊಳಕ್ಕೆ ಜಸ್ಟ್ 20 ರುಪೀಸ್
ಮೈಸೂರು, ಜೂನ್ 29: ಟ್ರೆಂಡ್ ನ ನೋಡಿ, ಅದರಿಂದ ಹಣ ಮಾಡುವವರನ್ನು ಬುದ್ಧಿವಂತರು ಅಂತಲೇ ಕರೆಯುತ್ತೇವೆ. ಸದ್ಯಕ್ಕಂತೂ ಎಲ್ಲೆಡೆ ಸೆಲ್ಫಿ ಬಗ್ಗೆ ವಿಪರೀತ ಆಕರ್ಷಣೆ ಇದೆ. ಅದರ ಪ್ರಯೋಜನವನ್ನು ಇಲ್ಲಿನ ರೈತರೊಬ್ಬರು ಮಾಡಿಕೊಂಡಿದ್ದಾರೆ. ತಾವು ಬೆಳೆದ ಬೆಳೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ದರ ನಿಗದಿ ಮಾಡಿದ್ದಾರೆ.
ನೀವು ನಂಬಲೇಬೇಕು, ಸೆಲ್ಫಿ ಸಾವಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ!
ಹೌದು, ರೈತರೊಬ್ಬರು ತಾವು ಬೆಳೆದ ಬೆಳೆ ಮುಂದೆ ಸೆಲ್ಫಿ ತೆಗೆಸಿಕೊಳ್ಳಲು ಬಯಸುವವರಿಗೆ ದರ ನಿಗದಿ ಮಾಡಿದ್ದಾರೆ ಕಣ್ರೀ. ಮುಂಗಾರು ಮಳೆ ಕೈಕೊಟ್ಟು ಬೆಳೆ ಒಣಗುತ್ತಿರುವ ಇಂತಹ ಸಂದರ್ಭದಲ್ಲಿ ಚಾಮಾರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಕುಮಾರ್ ಎಂಬ ರೈತರಿಗೆ ಇಂಥ ಐಡಿಯಾ ಬಂದಿದೆ.
ತಾವು ಸೂರ್ಯಕಾಂತಿ ಬೆಳೆದಿದ್ದು, ಈ ಬೆಳೆ ಸೊಂಪಾಗಿ ಬೆಳೆದು ನಿಂತಿದೆ. ತೋಟದ ತುಂಬೆಲ್ಲಾ ಸೂರ್ಯಕಾಂತಿ ಹೂವು ಅರಳಿ ನಿಂತಿದೆ. ಈ ಹೂಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರಿಗೆ ಒಂದು ಸೆಲ್ಫಿಗೆ 20 ರುಪಾಯಿ ನಿಗದಿ ಮಾಡಿದ್ದಾರೆ. ಸೆಲ್ಫಿ ಪ್ರಿಯರು ಹೆಚ್ಚಾಗಿ ಹೊಲದೊಳಗೆ ಬರುತ್ತಿರುವುದರಿಂದ ಸೂರ್ಯಕಾಂತಿ ಹೂಗಳು ಹಾಳಾಗುತ್ತಿದ್ದು, ಇದನ್ನು ಕಂಡ ರೈತರು ಒಂದು ಸೆಲ್ಫಿ ತೆಗೆದುಕೊಳ್ಳಲು 20 ರುಪಾಯಿ ದರ ನಿಗದಿ ಮಾಡಿ ಬೋರ್ಡ್ ಹಾಕಿದ್ದಾರೆ.
ಊಟಿ, ಕೇರಳ, ಮೈಸೂರಿಗೆ ಆಗಮಿಸುವ ಪ್ರವಾಸಿಗರು ಈ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ರೈತರಿಗೆ ಸ್ವಲ್ಪ ಆದಾಯ ಬರುತ್ತಿದೆ. ಇಲ್ಲಿ ಪ್ರವಾಸಿಗರು ತೆಗೆದುಕೊಂಡ ಸೆಲ್ಫಿಗಳನ್ನು ತಮ್ಮ ಫೇಸ್ಬುಕ್, ವಾಟ್ಸಪ್ ನಲ್ಲಿ ಹಾಕಿ ಖುಷಿ ಪಡುತ್ತಿದ್ದು, ಈ ಜಾಗದಲ್ಲಿ ಈಗ ಎಳನೀರು, ಐಸ್ ಕ್ರೀಂ ಮಾರಾಟಗಾರರು ವ್ಯಾಪಾರ ಕೂಡ ಶುರು ಮಾಡಿದ್ದಾರೆ.
ಸೂರ್ಯಕಾಂತಿ ಬೆಳೆಯಿಂದ ನಿತ್ಯ 3 ರಿಂದ 4 ಸಾವಿರ ರುಪಾಯಿ ಹಣ ಸಂಪಾದನೆಯಾಗುತ್ತಿದೆ. ಅದು ಯುವ ಜನಾಂಗದ ಸೆಲ್ಫೀ ಕ್ರೇಜ್ ಬಳಕೆ ಮಾಡಿಕೊಂಡು. ರೈತ ಕುಮಾರ್ ಮತ್ತೊಂದು ಆದಾಯದ ಮೂಲ ಮಾಡಿಕೊಂಡಿದ್ದಾರೆ.