ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ಎಷ್ಟು ಕೊಟ್ಟರೂ ಸಾಲುತ್ತಿಲ್ಲ ಎಂದು ಪದೇ ಪದೇ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯ ಕಿರುಕುಳಕ್ಕೆ ಬೇಸತ್ತು ಬಿ.ಎ.ಪದವೀಧರೆ ಮಹಿಳೆ ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೈಸೂರು, ನವೆಂಬರ್ 14: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೋಗಾದಿ 2ನೇ ಹಂತದಲ್ಲಿ ಸೋಮವಾರ ನಡೆದಿದೆ.
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬಿ.ಇ.ಪದವೀಧರೆ ಅಕ್ಷತಾ (25) ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಯಲಚೇನಹಳ್ಳಿ ನಿವಾಸಿ ಮಂಜುನಾಥ್ ಎಂಬುವವರ ಜತೆ ನಾಲ್ಕು ವರ್ಷದ ಹಿಂದೆ ಅಕ್ಷತಾ ಅವರು ಮದುವೆಯಾಗಿದ್ದರು.[ಬೆಂಗಳೂರಿನಲ್ಲಿ ಪತಿ ಎದುರೇ ಪತ್ನಿ ಆತ್ಮಹತ್ಯೆ]
ಮದುವೆ ವೇಳೆ ಅಕ್ಷತಾ ತಂದೆ ವರದಕ್ಷಿಣೆ ರೂಪದಲ್ಲಿ 1.ಕೆ.ಜಿ ಚಿನ್ನ, 2.ಕೆ.ಜಿ.ಬೆಳ್ಳಿ, ಮತ್ತು ಬೆಂಗಳೂರು ವಿಜಯನಗರದ 4ನೇ ಹಂತದಲ್ಲಿ 38ಲಕ್ಷ ರೂ.ಮೌಲ್ಯದ 40X50 ಸೈಟ್ ವೊಂದನ್ನು ನೀಡಲಾಗಿತ್ತು.
ಆದರೂ ಕೊಟ್ಟದ್ದು ಸಾಲುತ್ತಿಲ್ಲ ಎಂದು ಪತ್ನಿ ಅಕ್ಷತಾಳನ್ನು ಪತಿ ಮಂಜುನಾಥ್ ಪದೇ ಪದೇ ತವರುಮನೆಗೆ ಕಳುಹಿಸುತ್ತಿದ್ದ. ಬೆಂಗಳೂರಿನಲ್ಲಿ ಕಾಂಪ್ಲಕ್ಸ್ ಕೊಳ್ಳಲು ಹಣ ಬೇಕಾಗಿದ್ದು, 10ಲಕ್ಷ ರೂ. ತೆಗೆದುಕೊಂಡು ಬರುವಂತೆ ತವರುಮನೆಗೆ ಕಳುಹಿಸಿದ್ದ.
ಪತಿ ಹಣವನ್ನು ತರುವಂತೆ ಪದೇ ಪದೇ ತವರಿಗೆ ಕಳುಹಿಸುತ್ತಿದ್ದರಿಂದ ಅಕ್ಷತಾ ಸಾಕಷ್ಟು ನೊಂದುಕೊಂಡಿದ್ದಳು. ಓದು ಮುಗಿದ ಕೂಡಲೇ ವಿದೇಶಕ್ಕೆ ದುಡಿಯುವ ಕನಸು ಹೊಂದಿದ್ದಳು ಆದರೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ಮಂಜುನಥ್, ಮಾವ ಪುಟ್ಟೇಗೌಡ, ಅತ್ತೆ ಸುಧಾಮಣಿ ವಿರುದ್ಧ ಅಕ್ಷತಾ ಸಂಬಂಧಿಕರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ಮೈಸೂರು ಪೊಲೀಸರು ಮಂಜುನಾಥ್ ನಿವಾಸವಿರುವ ಬೆಂಗಳೂರು ಯಲಚೇನಹಳ್ಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದಗಿನಿಂದ ಪದೇ ಪದೇ ವರದಕ್ಷಿಣೆ ವಿಚಾರವಾಗಿ ಇಬ್ಬರ ದಾಂಪತ್ಯದಲ್ಲಿ ಹಲವು ಬಾರಿ ಬಿರುಕು ಮೂಡಿತ್ತು ಸಂಬಂಧಿಕರ 10 ಬಾರಿ ರಾಜೀ ಸಂಧಾನ ಕೂಡ ಮಾಡಿದ್ದರು ಎಂದು ಹೇಳಲಾಗಿದೆ.