ಮೈಸೂರಿನಲ್ಲಿ ಕಾಂಗ್ರೆಸ್ ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಕುಮಾರಣ್ಣ
ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ. ಮಾರ್ಚ್ 15ರಂದು ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ
ಮೈಸೂರು, ಫೆಬ್ರವರಿ 18 : ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ. ಮಾರ್ಚ್ 15ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಕುಮಾರಸ್ವಾಮಿ ಮಾತನಾಡಿ, ಶುಕ್ರವಾರ ನಂಜನಗೂಡು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಅಲ್ಲಿನ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಂಡಿದ್ದೇನೆ. ಎರಡೂ ಕಡೆ ಜೆಡಿಎಸ್ ಅಭ್ಯರ್ಥಿ ಹಾಕುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಆದರೆ ನಮ್ಮಲ್ಲಿ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ ಎಂದರು.[ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಫೆ.20ರಂದು ಬೃಹತ್ ಪ್ರತಿಭಟನೆ]
ನಂಜನಗೂಡಿನಲ್ಲಿ ನನ್ನನ್ನು ಬರಮಾಡಿಕೊಳ್ಳಲು ನಿಂತಿದ್ದ ಯುವಕರನ್ನು ಪೊಲೀಸರು ತಡೆದಿದ್ದಾರೆ. ಕಾಂಗ್ರೆಸ್ ಹೇಗೆ ಚುನಾವಣೆ ನಡೆಸಲಿದೆ ಎಂದು ಇದರಲ್ಲೇ ತಿಳಿಯಲಿದೆ. ಎರಡೂ ಕಡೆ ಜೆಡಿಎಸ್ ಗೆ ಜನರ ಬೆಂಬಲ ಇದೆ. ಗುಂಡ್ಲುಪೇಟೆಯಲ್ಲಿ ಮೊದಲಿನ ಪರಿಸ್ಥಿತಿ ಇಲ್ಲ. ಈಗಾಗಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡು ಕಡೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಕೇಶವಮೂರ್ತಿ ಬಿಟ್ಟು ಹೋದರೆ ಜೆಡಿಎಸ್ ಗೇನೂ ನಷ್ಟವಿಲ್ಲ
ಕಳಲೆ ಕೇಶವಮೂರ್ತಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದರು. ಇದೀಗ ನಾನು ಮತ್ತು ದೇವೇಗೌಡರು ಕಾಂಗ್ರೆಸ್ ಸೇರಿ ಎಂದು ಹೇಳಿದ್ದೇವೆ ಎನ್ನುತ್ತಿದ್ದಾರೆ. ನಾನಾಗಲಿ, ಪಕ್ಷದ ನಾಯಕರಾಗಲಿ ಯಾರೂ ಹಾಗೆ ಹೇಳಿಲ್ಲ. ನಮ್ಮ ಬಳಿ ಯಾರೂ ಕೂಡ ಈ ಕುರಿತು ಚರ್ಚಿಸಿಲ್ಲ. ಕೇಶವಮೂರ್ತಿ ಬಿಟ್ಟು ಹೋದರೆ ಜೆಡಿಎಸ್ ಗೇನೂ ನಷ್ಟವಿಲ್ಲ ಎಂದರು.
ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲ
ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಮ್ಮ ಪಕ್ಷದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಈ ಮೂಲಕ ನಮ್ಮ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರಿದ್ರ
20 ಚುನಾವಣೆಯನ್ನು ಎದುರಿಸಿದ್ದೇನೆ. ನನ್ನಲ್ಲಿ ಯಾವುದೇ ಗೊಂದಲವೂ ಇಲ್ಲ. ಭಯವೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರಿದ್ರವಿದೆ. ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಹೊಸಮುಖಗಳಿಗೆ ಅವಕಾಶ ಕೊಡುತ್ತೇವೆ. ಮುಖಂಡರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಇದು ರಾಜಕೀಯ ಧ್ರುವೀಕರಣವಲ್ಲ. 150 ಸ್ಥಾನ ಗೆದ್ದಿದ್ದೇವೆ ಅಂತ ಹೇಳುತ್ತಾರೆ.
ಸರಕಾರದಲ್ಲಿ ವೀರಪ್ಪನ್ ಗಿಂತಲೂ ಕೆಟ್ಟ ಜನರು
ಕಾಂಗ್ರೆಸ್ ನವರು ನಾವು ಕೂಡ ಮತ್ತೆ ಅಧಿಕಾರದಲ್ಲಿರುತ್ತೇವೆ ಎನ್ನುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಹೇಳಿಕೆಗಳಿಗೇನೂ ಕೊರತೆಯಾಗಿಲ್ಲ. ಈ ಸರಕಾರದಲ್ಲಿ ಆಡಳಿತ ನಡೆಸುತ್ತಿರುವವರು ವೀರಪ್ಪನ್ ಗಿಂತಲೂ ಕೆಟ್ಟ ಜನರು ಎಂದು ಲೇವಡಿಯಾಡಿದರು.
ಡೈರಿಯಲ್ಲಿ ಬರೆದಿರುವ ಮಾಹಿತಿಗಳು ಸತ್ಯ
ಗೋವಿಂದ ರಾಜು ಅವರು ಡೈರಿ ವಶಪಡಿಸಿಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಡೈರಿಯಲ್ಲಿ ಬರೆದಿರುವ ಮಾಹಿತಿಗಳು ಸತ್ಯ ಅಂತ ಒಪ್ಪಿಕೊಂಡಿದ್ದಾರೆ. ಹಣದ ಮಾಹಿತಿ ಬಗ್ಗೆ ತಿಳಿಸಿದ್ದಾರೆ. ಡೈರಿ ಮಾಹಿತಿ ಇಟ್ಟುಕೊಂಡು ಆರೋಪಿಯನ್ನಾಗಿಸುವುದು ಅಸಾಧ್ಯ ಅಂತಲೂ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಡಿ ಕೂಡ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಅಕ್ರಮ ಮಾಡಿದ್ದರೆ ಸಾಕ್ಷ್ಯ ಕೊಡಿ ಎಂದಿದ್ದರು. ಡೈರಿ ಇದೆಯಲ್ಲ, ಅಷ್ಟು ಸಾಕಲ್ಲವೇ, ಮತ್ತೇನು ಬೇಕು. ನೈತಿಕತೆಯಿದ್ದರೆ ಮಾತ್ರ ಸತ್ಯದ ಬಗ್ಗೆ ಮಾತನಾಡಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.