ವರ ಪರಾರಿಯಾದರೂ ಸುಖಾಂತ್ಯ ಕಂಡ ಮದುವೆ
ನಂಜನಗೂಡು, ನವೆಂಬರ್ 23 : ಕಲ್ಯಾಣ ಮಂಟಪದಿಂದ ವರ ಪರಾರಿಯಾದರೂ ವಧುವಿಗೆ ಮತ್ತೊಬ್ಬ ವರನನ್ನು ಅದೇ ಸಮಯದಲ್ಲಿ ನಿಶ್ಚಯ ಮಾಡಿ ಮದುವೆಯನ್ನು ಸುಖಾಂತ್ಯಗೊಳಿಸಿದ ಘಟನೆ ನಂಜನಗೂಡಿನಲ್ಲಿ ಬುಧವಾರ ನಡೆದಿದೆ.
ನಂಜನಗೂಡು ತಾಲೂಕಿನ ತೊಂಡವಾಡಿ ಗ್ರಾಮದ ಮಹದೇವಮ್ಮ ಮತ್ತು ಪಿಣ್ಣನಾಯ್ಕ ದಂಪತಿ ಪುತ್ರ ಉಮೇಶ್ ಎಂಬಾತನೇ ಕಲ್ಯಾಣ ಮಂಟಪದಿಂದ ಪರಾರಿಯಾದ ಭೂಪ. ಸಿನಿಮೀಯವಾಗಿ ನಡೆದಿರುವ ಈ ಘಟನೆಯ ಖಳನಾಯಕ ಉಮೇಶ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಈತ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಸಂದರ್ಭ ಪರಿಚಯವಾದ ಚಿಕ್ಕಮಗಳೂರು ತಾಲೂಕಿನ ನಂದಿಕೆರೆ ಗ್ರಾಮದ ರಾಧಾ ಎಂಬಾಕೆಯ ಪರಿಚಯವಾಗಿ ಒಬ್ಬರನೊಬ್ಬರು ಪ್ರೀತಿಸಿ 2012ರಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಅವರಿಗೆ ಮೂರು ವರ್ಷದ ಹೆಣ್ಣು ಮಗು ಕೂಡ ಇದೆ.
ತಾನು ಮದುವೆಯಾಗಿರುವುದನ್ನು ಉಮೇಶ ಮುಚ್ಚಿಟ್ಟಿದ್ದನು. ಹೀಗಾಗಿ ಈತನ ತಾಯಿ ಮಹದೇವಮ್ಮ ಅವರ ತಮ್ಮ ಮಹದೇವನಾಯ್ಕ ಎಂಬುವರ ಮಗಳನ್ನು ತಂದುಕೊಳ್ಳಲು ನಿಶ್ಚಯಿಸಿ ಮಾತುಕತೆ ನಡೆಸಿದ್ದರು.
ಈ ಸಂದರ್ಭವೂ ಉಮೇಶ ತನಗೆ ಮದುವೆಯಾಗಿರುವ ವಿಚಾರವನ್ನು ಹೇಳಿರಲಿಲ್ಲ. ಹೀಗಾಗಿ ಮದುವೆಗೆ ಸಿದ್ಧತೆಗಳು ನಡೆದು ನ.23ರಂದು ಮದುವೆ ನಡೆಯುವುದರಲ್ಲಿತ್ತು. ನ.22ರಂದು ರಾತ್ರಿ ವರನ ಹಾಗೂ ವಧುವಿನ ಮನೆಯವರು ಕಲ್ಯಾಣಮಂಟಪಕ್ಕೆ ಆಗಮಿಸಿದ್ದರು.
ಈ ಮಧ್ಯೆ ಉಮೇಶ ಮದುವೆ ಮಾಡಿಕೊಳ್ಳುತ್ತಿರುವ ವಿಚಾರ ಆತನ ಪತ್ನಿಗೆ ಹೇಗೋ ಗೊತ್ತಾಗಿ ಅವರ ಕಡೆಯವರು ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಇದು ತಿಳಿಯುತ್ತಿದ್ದಂತೆಯೇ ವರ ಉಮೇಶ ಅಲ್ಲಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ವಧುವಿನ ಕಡೆಯವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಆದರೆ ಮದುವೆ ನಿಲ್ಲಬಾರದು ಎಂಬ ಕಾರಣಕ್ಕೆ ಹಿರಿಯರೆಲ್ಲರೂ ಸೇರಿ ತೀರ್ಮಾನ ಕೈಗೊಂಡು ಐಟಿಸಿ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಯುವಕನೊಂದಿಗೆ ವಿವಾಹ ನಡೆಸಿ ಸುಖಾಂತ್ಯಗೊಳಿಸಲಾಗಿದೆ.