ಮೈಸೂರಿನ ಅರಮನೆಯ ತ್ರಿನೇಶ್ವರನಿಗೆ ಚಿನ್ನದ ಕೊಳಗ
ಮೈಸೂರು, ಫೆಬ್ರವರಿ 23 : ಮೈಸೂರಿನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭರದ ಸಿದ್ಧತೆಗಳು ನಡೆದಿವೆ. ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿಯೂ ಭರದ ಸಿದ್ಧತೆಗಳು ನಡೆದಿದ್ದು, ಶಿವಲಿಂಗಕ್ಕೆ ತೊಡಿಸುವ ಚಿನ್ನದ ಲೇಪನದ ಕೊಳಗವನ್ನು ಜಿಲ್ಲಾಡಳಿತ ಕೊಂಡೊಯ್ದು ನೀಡಿದೆ.
ಶಿವಲಿಂಗಕ್ಕೆ ವರ್ಷಕ್ಕೆ ಒಂದೇ ಬಾರಿ ಚಿನ್ನದ ಲೇಪಿತ ಕೊಳಗವನ್ನು ತೊಡಿಸಲಾಗುತ್ತದೆ. ಗುರುವಾರ ಜಿಲ್ಲಾಡಳಿತ ತ್ರೀನೇಶ್ವರ ದೇವಸ್ಥಾನದ ಅರ್ಚಕರಿಗೆ ಚಿನ್ನದ ಲೇಪಿತ ಕೊಳಗವನ್ನು ಕೊಂಡೊಯ್ದು ನೀಡಿತು.
ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಸಾರ್ವಜನಿಕರಿಗೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ದೇವರ ದರ್ಶನ ಪಡೆಯಲು ಅವಕಾಶವಿದೆ. ಜಿಲ್ಲಾಧಿಕಾರಿ ಡಿ.ರಂದೀಪ್ ತ್ರಿನೇತ್ರ ದೇವಾಲಯಕ್ಕೆ ಭೇಟಿ ನೀಡಿ ದೇವರ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರಿಸಿದರು.
ಶಿವರಾತ್ರಿ ಪ್ರಯುಕ್ತ ನಡೆದಿದೆ ಭರದ ಸಿದ್ಧತೆ
ಶುಕ್ರವಾರದ ಮಹಾಶಿವರಾತ್ರಿ ಪ್ರಯುಕ್ತ ಭರದ ಸಿದ್ಧತೆಗಳು ನಡೆದಿದ್ದು, ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿದ ರಾಮಾನುಜ ರಸ್ತೆಯಲ್ಲಿರುವ ಗುರುಕುಲ ಟ್ರಸ್ಟ್ ನ 101 ಶಿವಲಿಂಗಗಳನ್ನು ಶಿವರಾತ್ರಿ ಪ್ರಯುಕ್ತ ಶುಚಿಗೊಳಿಸಲಾಯಿತು. ಶಿವನ ದೇವಾಲಯ ಮತ್ತು ಶಿವನ ಪ್ರತಿಮೆಗಳಿರುವ ಕಡೆ ವಿಶೇಷ ಗಮನ ವಹಿಸಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.
ಅಹಿತಕರ ಘಟನೆ ನಡೆಸಿದರೆ ಕ್ರಮ : ಪೊಲೀಸ್ ಆಯುಕ್ತರ ಎಚ್ಚರಿಕೆ
ಮಹಾಶಿವರಾತ್ರಿ ಆಚರಣೆ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಕಮೀಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಎಚ್ಚರಿಕೆ ನೀಡಿದ್ದಾರೆ.
ಶಿವರಾತ್ರಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಶಿವನ ದೇವಾಲಯಗಳಿಗೆ ತೆರಳುವುದು ಮತ್ತು ರಾತ್ರಿ ಜಾಗರಣೆ ಮಾಡುವುದು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸೂಚನೆ ಪಾಲಿಸುವಂತೆ ತಿಳಿಸಿದ್ದಾರೆ.
ಮಹಿಳೆಯರು ತಮ್ಮ ಬೆಲೆ ಬಾಳುವ ಆಭರಣಗಳು ಮತ್ತು ವಸ್ತುಗಳ ಮೇಲೆ ನಿಗಾ ವಹಿಸುವುದು ಹಾಗೂ ಆ ವೇಳೆಯಲ್ಲಿ ಚಿನ್ನಾಭರಣ ಧರಿಸಿಕೊಂಡು ಒಂಟಿಯಾಗಿ ಓಡಾಡಬಾರದು. ರಸ್ತೆಯಲ್ಲಿ ವಾಹನಗಳ ವ್ಹೀಲಿಂಗ್ ಮಾಡುವುದು, ಅಜಾಗರೂಕ ಮತ್ತು ಅತಿ ವೇಗವಾಗಿ ವಾಹನ ಚಾಲನೆ ಮಾಡುವುದನ್ನು ನಿಷೇಧಿಸಿದೆ.
ಆಟೋ ಮತ್ತು ಕ್ಯಾಬ್ ವಾಹನದವರು ಸಾರ್ವಜನಿಕರು ಕರೆದ ಕಡೆ ಬರಲು ನಿರಾಕರಿಸುವುದು, ಹೆಚ್ಚಿನ ಹಣ ಕೊಡುವಂತೆ ಪೀಡಿಸುವುದು ಇವೆಲ್ಲವನ್ನು ಮಾಡಬಾರದು. ಮಹಿಳೆಯರು ಮತ್ತು ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಬಾರದು. ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಧಕ್ಕೆ ಉಂಟುಮಾಡುವಂತಹ ಯಾವುದೇ ಕೃತ್ಯಗಳನ್ನು ಮಾಡಬಾರದು.
ಅಲ್ಲದೇ ರಸ್ತೆ ಮಧ್ಯದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಅನುಮತಿ ಇಲ್ಲದೇ ಧ್ವನಿವರ್ಧಕಗಳನ್ನು ಬಳಸುವ ಹಾಗಿಲ್ಲ. ಜಾಗರಣೆ ಆಚರಿಸುವ ನೆಪದಲ್ಲಿ ಜೂಜಾಟದಲ್ಲಿ ತೊಡಗುವುದನ್ನು ನಿಷೇಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಇಲ್ಲವೇ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100 ಅಥವಾ 2418139 ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.