ನಿಶ್ಚಿತ ಗುರಿಯೊಂದಿಗೆ ಬದುಕು ಕಟ್ಟಿಕೊಳ್ಳಿ: ವಜುಭಾಯಿ ವಾಲಾ
ಮೈಸೂರು,ಜನವರಿ,08 : ದೇಶದಲ್ಲಿ ಉತ್ತಮ ಬೌದ್ಧಿಕ ಸಾಮರ್ಥ್ಯ ಹೊಂದಿದ ಮಂದಿಗೆ ಕೊರತೆ ಇಲ್ಲ. ಆದರೂ ಅವಕಾಶಗಳು ಸಿಗುತ್ತಿಲ್ಲ. ಬೇರೆ ದೇಶದಲ್ಲಿ ಸಿಗುವ ಸೌಲಭ್ಯ ಇಲ್ಲಿ ಸಿಗುತ್ತಿಲ್ಲ. ಉತ್ತಮ ಅವಕಾಶ ದೊರೆತ್ತಿದ್ದರೆ ಹಲವು ಸಂಶೋಧನೆಯಲ್ಲಿ ತೊಡಗಿ ದೇಶಕ್ಕೆ ಕೀರ್ತಿ ತರುತ್ತಿದ್ದರು ಎಂದು ರಾಜ್ಯ ರಾಜ್ಯಪಾಲ ವಜುಭಾಯಿ ರೂಢವಾಲಾ ವಿಷಾದ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಕ್ರಾಫರ್ಡ್ ಭವನದಲ್ಲಿ ಗುರುವಾರ ಆಯೋಜಿಸಿದ್ದ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, 'ಭಾರತೀಯರು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ವಿದೇಶಕ್ಕೆ ಹೋಗುವ ಪರಿಸ್ಥಿತಿ ಇದೆ. ಆದರೆ, ಹಿಂದೆ ವಿದೇಶಿಗರು ಭಾರತಕ್ಕೆ ಬರುತ್ತಿದ್ದರು. ಇದನ್ನು ಗಮನಿಸಿದರೆ ವಿದೇಶಿಗರು ಟೆಕ್ನಾಲಜಿಯಲ್ಲಿ ಮುಂದೆ ಇದ್ದು, ನಾವೂ ಬಹಳ ಹಿಂದೆ ಉಳಿದಿದ್ದೇವೆ' ಎಂದು ತಿಳಿಸಿದರು.[ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಹೇಗಿತ್ತು?]
ಜೀವನದಲ್ಲಿ ನಿಶ್ಚಿತ ಗುರಿಯನ್ನಿಟ್ಟುಕೊಂಡರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಭಯ ಬಿಟ್ಟು ಗುರಿ ಪೂರ್ಣವಾಗುವವರೆಗೂ ಶ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ರಾಜ್ಯ ಸರ್ಕಾರ ಶಿಕ್ಷಣ, ಆರೋಗ್ಯಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದು, ಎಲ್ಲರೂ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.[ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]
ಐಎಸ್ ಸಿಎ ಅಧ್ಯಕ್ಷ ಪ್ರೊ.ಡಿ.ನಾರಾಯಣ ರಾವ್ ಮಾತನಾಡಿ, ಮುಂದಿನ 104ನೇ ಅಂತಾರಾಷ್ಟ್ರೀಯ ಕಾಂಗ್ರೆಸ್ ಸಮಾವೇಶ ಚೆನ್ನೈನ ಎಸ್ಆರ್ಎಮ್ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳಲ್ಲಿ ಸಾಧನೆಗೈದ ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.