ಮೈಸೂರು ವಿವಿ ಹಗರಣ: ಸಮ್ಮೇಳನದ ಹೆಸರಲ್ಲಿ ಕೋಟಿ ಕೋಟಿ ಲೂಟಿ
ಮೈಸೂರು ವಿಶ್ವವಿದ್ಯಾಲಯದಲ್ಲಿ ಹಗರಣ. ಶತಮಾನೋತ್ಸವ ಆಚರಣೆ ಹೆಸರಲ್ಲಿ ಕೋಟಿ ಕೋಟಿ ರು. ಹಣ ಲೂಟಿ.
ಮೈಸೂರು, ಜುಲೈ 31 : ಮೈಸೂರು ವಿವಿಯಲ್ಲಿ ಇತ್ತೀಚೆಗೆ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾರೀ ಹಗರಣ ನಡೆದಿರುವ ಬಗ್ಗೆ ಅನುಮಾನವಿದೆ ಎಂದು ತಿಳಿಸುವ ಮೂಳಕ ಮೈಸೂರು ವಿವಿ ಹಂಗಾಮಿ ಕುಲಪತಿ ದಯಾನಂದ ಮಾನೆ ಭಾರೀ ಬಾಂಬ್ ಸಿಡಿಸಿದ್ದಾರೆ.
ಮೈಸೂರು ವಿವಿ ರಾಣಿ ಬಹದ್ದೂರು ಸಭಾಂಗಣದಲ್ಲಿ ರಾಜ್ಯ ಹಿಂದುಳಿದ ವರ್ಗ ಜಾಗೃತ ವೇದಿಕೆ ಹಾಗೂ ದಿ.ರಾಕೇಶ್ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆ ಸಹಯೋಗದೊಂದಿಗೆ ರಾಕೇಶ್ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಬಾಂಬ್ ಸಿಡಿಸಿದ್ದಾರೆ.
ಮೈಸೂರು ವಿವಿ ಶತಮಾನೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನದಲ್ಲಿ ಗಣ್ಯರ ಊಟ - ಉಪಚಾರಕ್ಕಾಗಿಯೇ 9 ಕೋಟಿ ರೂ ಗೂ ಅಧಿಕ ಹಣ ಹಂತ ಹಂತವಾಗಿ ಬಿಡುಗಡೆ ಮಾಡಿಕೊಂಡು ಖರ್ಚು ಮಾಡಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಇದಕ್ಕೆ ಸೂಕ್ತ ಉತ್ತರ ನೀಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಮ್ಮೇಳನಕ್ಕೆ ಊಟ, ವಸತಿ ವೆಚ್ಚಕ್ಕಾಗಿ ನಿಗದಿಯಾಗಿದ್ದ ಹಣವೇ ಬೇರೆ, ನಂತರ ಹೆಚ್ಚುವರಿಯಾಗಿ ಲೆಕ್ಕ ತೋರಿಸಿ, ಮತ್ತಷ್ಟು ಬಿಡುಗಡೆಯಾಗಿದೆ. ಇದು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಲೆ ಬಾಳುವ ವಾಚ್ ಕಟ್ಟಿದ್ದ ಬಗ್ಗೆ ಅಂತೆ, ಕಂತೆಗಳ ಕುರಿತು ಮಾಧ್ಯಮಗಳು ರಾಷ್ಟ್ರ ಮಟ್ಟದಲ್ಲಿ ಪ್ರಸಾರ ಮಾಡಿ ಸಾರ್ವಜನಿಕ ಚರ್ಚೆ ನಡೆಸಿದವು.
ಆದರೆ, ಮೈಸೂರು ವಿವಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಧ್ಯಮಗಳು ಚರ್ಚೆಯೇ ಮಾಡದಿರುವುದು ಬೇಸರದ ಸಂಗತಿ ಎಂದರು. ಭಾರತದ ಸಂವಿಧಾನದ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ಕು ವರುಷದ ತಮ್ಮ ಆಳ್ವಿಕೆಯಲ್ಲಿ ಅಕ್ಷರಶಃ ಪಾಲಿಸಿದ್ದಾರೆ.
ಅವರೊಬ್ಬ ಕಳಂಕರಹಿತ, ಹಗರಣ ಮುಕ್ತ ರಾಜಕಾರಣಿ ಎಂದರೆ ತಪ್ಪಾಗಲಾರದು. ಇವರು, ಸಂವಿಧಾನದ ಆಶಯಗಳನ್ನುತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆ ವಿವಿ ಹಂಗಾಮಿ ಕುಲಪತಿಗಳೇ, ವಿವಿಯಲ್ಲಾದ ಅಕ್ರಮವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಿಳಿಸಿರುವುದು ಎಲ್ಲರಲ್ಲೂ ಆಶ್ಚರ್ಯಮೂಡಿಸಿರುವುದಲ್ಲದೇ, ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನದ ಕುರಿತಾದ ಹಣದ ವ್ಯವಹಾರವನ್ನು ಸಮಗ್ರ ತನಿಖೆ ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ.