ಮಂಗಳೂರಿಗೆ ಕೆಂಪಯ್ಯರನ್ನು ಕಳಿಸಿದ್ದಕ್ಕೆ ಸಿದ್ದುಗೆ ಜಾಡಿಸಿದ ಸುರೇಶ್
ಮೈಸೂರು, ಜುಲೈ 12 : ಮಂಗಳೂರಿನಲ್ಲಿ ನಡೆದ ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ, ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಶಾಂತಿ ಸಭೆ ಮಾಡಬೇಕಿದ್ದ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಕೋಮು ಪ್ರಚೋದನೆ ಮಾಡುವ ಮೂಲಕ ಗಲಭೆಗೆ ಬಿಜೆಪಿ ಕಾರಣವೆಂದು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಈಗಲಾದರೂ ರಾಜಕೀಯ ಮಾತನಾಡುವುದನ್ನು ಬಿಟ್ಟು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.
ಗಲಭೆ ಪೀಡಿತ ಬಂಟ್ವಾಳಕ್ಕೆ ಡಿಜಿಪಿ ದತ್ತಾ, ಕೆಂಪಯ್ಯ ಭೇಟಿ
ಗಲಭೆಯಲ್ಲಿ ಅವರಿವರ ಪಾತ್ರವಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ಗಲಭೆಗೂ ಮುನ್ನ ಕಲ್ಲಡ್ಕ್ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಪೊಲೀಸರಿಗೆ ಸೂಚನೆ ನೀಡಿದ್ದನ್ನು ಮರೆತಿದೆ. ಇದರಿಂದ ಪ್ರಚೋದನೆಗೊಂಡ ಗುಂಪೊಂದು ಶರತ್ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದೆ. ಆದ್ದರಿಂದ ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ
ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರನ್ನು ಗಲಭೆ ನಿಯಂತ್ರಿಸಲು ನಿಯೋಜಿಸಿರುವುದು ಪೊಲೀಸರ ಆತ್ಮ ಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಇವರು ಆಧಿಕಾರ ಹಸ್ತಕ್ಷೇಪ ಮಾಡಿ ಕಾರ್ಯ ನಿರ್ವಹಿಸುತ್ತಿರುವುದು ಇಡೀ ಇಲಾಖೆಗೆ ತಿಳಿದಿದೆ. ಇಂಥವರನ್ನು ಗಲಭೆ ನಿಯಂತ್ರಿಸಲು ನಿಯೋಜಿಸಿರುವುದು ಎಷ್ಟು ಸಮಂಜಸವೆಂದು ಪ್ರಶ್ನಿಸಿದರು.
ಡಿಐಜಿಗೆ ಮಾಡಿದ ಅವಮಾನ
ಕೆಂಪಯ್ಯ ಗೃಹ ಇಲಾಖೆಗೆ ಸಲಹೆಗಾರರೋ ಅಥವಾ ರಾಜ್ಯ ಸರಕಾರಕ್ಕೆ ಸಲಹೆಗಾರರೋ ಗೊತ್ತಿಲ್ಲ. ಅವರು ಯಾವುದಕ್ಕೆ ಸಲಹೆ ನೀಡಬೇಕೋ ಅದಕ್ಕೆ ನೀಡಲಿ. ಇಂತಹ ಪ್ರಕರಣಗಳಲ್ಲಿ ಸಲಹೆ ಬೇಕಿಲ್ಲ. ಕೆಂಪಯ್ಯರಂಥ ವ್ಯಕ್ತಿಯ ಜೊತೆ ಡಿಐಜಿಯನ್ನು ಹೋಗು ಅಂತ ಹೇಳೋದು ಆ ಹುದ್ದೆಗೆ ಮಾಡಿದ ಅವಮಾನ ಎಂದು ಸುರೇಶ್ ಕುಮಾರ್ ಕಿಡಿ ಕಾರಿದರು.
ಇನ್ನೆರಡು ದಿನ ಕಾದು ನೋಡೋಣ
ಕೆಂಪಯ್ಯ ನೇಮಕ ಸಂದರ್ಭದಲ್ಲಿ ಪರಮೇಶ್ವರ್ ಏನು ಹೇಳಿದ್ದರು ಅಂತ ನಮಗೆ ಗೊತ್ತಿದೆ. ಇನ್ಯಾವ ಗೃಹ ಸಚಿವರಿಗೆ ಕೆಂಪಯ್ಯ ಜೊತೆ ಕೆಲಸ ಮಾಡುವ ಅನಿವಾರ್ಯ ಇದೆಯೋ ಗೊತ್ತಿಲ್ಲ. ಕೆಂಪಯ್ಯರ ನೇಮಕದ ನಂತರದ ಪರಿಸ್ಥಿತಿಯನ್ನು ಗಮನಿಸೋಣ. ಇನ್ನೆರಡು ದಿನ ಏನಾಗುತ್ತದೆ ಅಂತ ಕಾದು ನೋಡೋಣ ಎಂದರು.
ವಿಸ್ತಾರಕ ಕಾರ್ಯಕ್ರಮಕ್ಕೆ ನಿರ್ಮಲಾ ಸೀತಾರಾಮನ್ ಭಾಗಿ
ದೀನ್ ದಯಾಳ್ ಉಪಾಧ್ಯಾಯ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಂದ ವಿಸ್ತಾರಕ ಯೋಜನೆ ಕಾರ್ಯಕ್ರಮವನ್ನು ಜುಲೈ 13ರಂದು ಹಮ್ಮಿಕೊಳ್ಳಲಾಗಿದೆ . ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ವಿಸ್ತಾರಕರಾಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. '
ಏನೇನು ಕಾರ್ಯಕ್ರಮಗಳು
ಅಂದು ಬೆಳಗ್ಗೆ 7ಕ್ಕೆ ವಾರ್ಡ್ 47ರ ರಾಜೇಂದ್ರ ನಗರದಲ್ಲಿ ಸ್ವಚ್ಛತಾ, ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಆ ನಂತರ 10ಕ್ಕೆ ಗೋಕುಲಂನಲ್ಲಿ ಮನೆ ಮನೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3ಕ್ಕೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದು, ಸಂಜೆ 4ಕ್ಕೆ ವಿದ್ಯಾರಣ್ಯ ಪುರಂನಲ್ಲಿ ಬೂತ್ ಸಮಿತಿ ಸಭೆ ನಡೆಸುವರು.
ಸಂಜೆ 5ಕ್ಕೆ ಹೋಟೆಲ್ ಪೈ-ವಿಸ್ತಾದಲ್ಲಿ ಉದ್ಯಮಿಗಳೊಂದಿಗೆ ಜಿಎಸ್ ಟಿ ಕುರಿತು ಸಂವಾದ ನಡೆಸುವರು.