ಪಟ್ಟಣದ ಗೆಂಡೆ ಹೊಸಹಳ್ಳಿ ಪಕ್ಷಿಧಾಮ ಬೆಂಕಿಗೆ ನಾಶ
ಶ್ರೀರಂಗಪಟ್ಟಣ, ಏಪ್ರಿಲ್ 05 : ಕಾಡ್ಗಿಚ್ಚಿಗೆ ತಾಲೂಕಿನ ಗೆಂಡೆ ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದ ಪಕ್ಷಿಧಾಮ ಗೆಂಡೆ ಹೊಸಹಳ್ಳಿ ಪಕ್ಷಿಧಾಮ ನಾಶವಾಗಿದೆ. ಇಲ್ಲಿನ ಸುಮಾರು 200 ಎಕರೆಯಷ್ಟು ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.
ಗೆಂಡೆ ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಬೋರೆದೇವರು ದೇವಾಲಯದ ಬಳಿ ಇರುವ ಸುಮಾರು 2 ಸಾವಿರ ಎಕರೆಯಷ್ಟು ವಿಶಾಲವಾದ ಅರಣ್ಯದಲ್ಲಿ ಪಕ್ಷಿಗಳು ನೆಲೆ ಕಂಡುಕೊಂಡಿದ್ದು, ರಂಗನತಿಟ್ಟಿನಂತೆ ಹೆಸರುವಾಸಿಯಾಗುತ್ತಿದೆ. ಕಾವೇರಿ ನದಿ ತೀರದ ಬಯಲು ಪ್ರದೇಶವಾಗಿರುವುದರಿಂದ ಪಕ್ಷಿಗಳು ಇಲ್ಲಿ ಆಶ್ರಯ ಕಂಡುಕೊಂಡಿವೆ.
ಇಲ್ಲಿ ವಿವಿಧ ಜಾತಿಯ ಪಕ್ಷಿಗಳು, ನವಿಲು, ಹೆಬ್ಬಾವು, ಕಾಡುಹಂದಿ ಸೇರಿದಂತೆ ಇತರೆ ಸಣ್ಣ ಸಣ್ಣ ಸಾವಿರಾರು ಪ್ರಾಣಿ ಪಕ್ಷಿಗಳು ಆಶ್ರಯ ಪಡೆದಿವೆ. ಆದರೆ, ಕಾಡ್ಗಿಚ್ಚಿನಿಂದಾಗಿ ಹಲವಾರು ಪ್ರಾಣಿ ಪಕ್ಷಿಗಳು ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿವೆ. [ಭರಚುಕ್ಕಿ ಅರಣ್ಯದಲ್ಲಿ ಕಾಡ್ಗಿಚ್ಚು, ಕ್ಯಾರೆ ಎನ್ನದ ಸಿಬ್ಬಂದಿ!]
ವನ್ಯ ಜೀವಿ ಸಂರಕ್ಷಣಾ ಪ್ರದೇಶವಾದ ಈ ಸ್ಥಳಕ್ಕೆ ಹೇಗೆ ಬೆಂಕಿ ತಗುಲಿದೆ ಎಂಬುದು ಗೊತ್ತಾಗಿಲ್ಲ. ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತಿಕೊಂಡಿರಬಹುದೇನೋ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲೇ ಸುಮಾರು 200 ಎಕರೆ ಪ್ರದೇಶ ನಾಶವಾಗಿತ್ತು.
ಆದರೆ ಪ್ರಾಣಿ ಪಕ್ಷಿಗಳು ಬೆಂಕಿಗೆ ಹೆದರಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಪಲಾಯನ ಮಾಡಿವೆ. ಸಣ್ಣಪುಟ್ಟ ಜೀವ ಜಂತುಗಳು ಬೆಂಕಿಗೆ ಆಹುತಿಯಾಗಿವೆ. ಮಳೆಯಿಲ್ಲದೆ ಕುರುಚಲು ಗಿಡಗಳೆಲ್ಲ ಒಣಗಿ ನಿಂತಿದ್ದರಿಂದ ಬೆಂಕಿ ರಭಸದಿಂದ ಹರಡಿ ಭಾರೀ ಅನಾಹುತ ಸಂಭವಿಸಿದೆ. [ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ]