ಹುಲಿ ಕಚ್ಚಿದ್ದಕ್ಕಿಂತ ಬಡತನದ ಗಾಯವೇ ಹೆಚ್ಚು ಆಳ!
ಜೀವವನ್ನು ಕಿತ್ತು ತಿನ್ನುವ ನೋವು... ಕೀವು ತುಂಬಿದ ಗಾಯಗಳಲ್ಲಿ ತುರಿಕೆ.. ಕೂರಲಿಕ್ಕೂ ಆಗದೆ ನಿಲ್ಲುವುದಕ್ಕೂ ಆಗದೆ ಪರದಾಟ.. ಕಣ್ತುಂಬ ನಿದ್ದೆಯಿಲ್ಲ.. ಜೀವವಿದ್ದರೂ ಸತ್ತಂತೆ ಆಗಿರುವ ಬದುಕು...
ಇದು ಹುಲಿ ದಾಳಿಯಿಂದ ಬದುಕಿ ಬಂದಿರುವ ನಂಜನಗೂಡು ತಾಲೂಕಿನ ನಾಗಣಾಪುರ ಕಾಲೋನಿಯ ಆದಿವಾಸಿ ಸಣ್ಣಯ್ಯನ ಸ್ಥಿತಿ. ದುಡಿಯಲೂ ಸಾಧ್ಯವಾಗದೆ, ಗಾಯವೂ ವಾಸಿಯಾಗದೆ ಅಂಗವಿಕಲನಂತಾಗಿರುವ ಸಣ್ಣಯ್ಯನ ಮುಖದಲ್ಲಿ ಬದುಕುವ ಉತ್ಸಾಹವಿಲ್ಲ. ಮೈ ಮೇಲೆ ಎರಗಿದ ಆ ಹುಲಿ ಸಾಯಿಸಿದ್ದರೆ ಈ ನರಕ ಪಡಬೇಕಾಗುತ್ತಿರಲಿಲ್ಲ. ಕುಟುಂಬ ದಿನವೂ ಕಣ್ಣೀರುಗರೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾ ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಾನೆ ಸಣ್ಣಯ್ಯ.[ಮೈಸೂರು : ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ]
ಇತ್ತೀಚೆಗೆ ಇಬ್ಬರನ್ನು ಭಕ್ಷಿಸಿ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಸಾವನ್ನಪ್ಪಿದ ನರಭಕ್ಷಕ ಹುಲಿ ದಾಳಿಗೆ ಸಣ್ಣಯ್ಯ ಸಿಕ್ಕಿ ಹಾಕಿಕೊಂಡಿದ್ದರು. ಸಣ್ಣಯ್ಯ ನವೆಂಬರ್ 12 ರ ಗುರುವಾರದಂದು ಹೆಚ್.ಡಿ.ಕೋಟೆ ತಾಲೂಕಿನ ಅಳಲಹಳ್ಳಿ ಕಾಲೋನಿಯ ತಮ್ಮ ಸಂಬಂಧಿಕರು ಮರಣ ಹೊಂದಿದ ಕಾರಣ ಅಲ್ಲಿಗೆ ತೆರಳಿದ್ದರು.
ಈ ಸಂದರ್ಭ ರಸ್ತೆ ಸಮೀಪದ ಪೊದೆಯಲ್ಲಿ ಮೇಕೆಗಳನ್ನು ತಿನ್ನುತ್ತಾ ಕುಳಿತಿದ್ದ ಹುಲಿಯು ಅವರ ಮೇಲೆರಗಿ ಸೊಂಟದ ಕೆಳಭಾಗವನ್ನು ಪರಚಿ ಕಚ್ಚಿ ಗಂಭೀರ ಗಾಯಗೊಳಿಸಿದ್ದಲ್ಲದೆ, ಅವರನ್ನು ತಿನ್ನಲು ಹೊತ್ತೊಯ್ಯುತ್ತಿತ್ತು. ಅಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಹುಲಿಯನ್ನು ಓಡಿಸಿದ್ದಾರೆ. ಬಳಿಕ ಹುಲಿ ಬಾಯಿಗೆ ಸಿಲುಕಿದ ಸಣ್ಣಯ್ಯನನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಿದ್ದಾರೆ.[ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ಜನ ಸಣ್ಣಯ್ಯ ಸತ್ತೇ ಹೋಗುತ್ತಾರೆಂದು ನಂಬಿಕೊಂಡಿದ್ದರು. ಅದೃಷ್ಟವಶಾತ್ ಬದುಕಿ ಉಳಿದಿದ್ದರು. ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮೈಮೇಲಿನ ಗಾಯ ಮಾಗಿದಂತೆ ಕಂಡು ಬಂದ ಕಾರಣ ಇನ್ನು ಮುಂದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ಹೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಆತನನ್ನು ಆಸ್ಪತ್ರೆಯಿಂದ ಮನೆಗೆ ತಂದು ಬಿಟ್ಟು ಹೋದವರು ಮರಳಿ ಬಂದಿಲ್ಲ.
ಮೇಲ್ನೋಟಕ್ಕೆ ಗಾಯ ವಾಸಿ ಆದಂತೆ ಕಂಡರೂ ಗಾಯದ ಒಳಗೆ ಕೀವು ತುಂಬಿಕೊಂಡಿದೆ. ಚಿಕಿತ್ಸೆ ಬಳಿಕ ವೈದ್ಯರು ಬರೆದು ಕೊಟ್ಟಿರುವ ಮಾತ್ರೆಗಳನ್ನು ತೆಗೆದುಕೊಳ್ಳಲು ಅವರ ಬಳಿ ಹಣವಿಲ್ಲದಂತಾಗಿದೆ. ರಾತ್ರಿಯ ವೇಳೆಯಲ್ಲಿ ನಿದ್ದೆ ಮಾಡಬೇಕಾದರೆ ನೋವು ಶಮನಕಾರಿ ಮಾತ್ರೆ ನುಂಗಬೇಕು. ಆದರೆ ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಸಾಧ್ಯ ನೋವನ್ನು ಅನುಭವಿಸುತ್ತಾ ದಿನ ಕಳೆಯಬೇಕಾಗಿದೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಇಡೀ ಕುಟುಂಬಕ್ಕೆ ಸಣ್ಣಯ್ಯ ಆಧಾರ ಸ್ಥಂಭವಾಗಿದ್ದರು. ಈಗ ಅವರು ಹಾಸಿಗೆ ಹಿಡಿದಿರುವುದರಿಂದ ಹೆಂಡತಿ ಶಿವಮ್ಮ ಕೂಲಿ ಮಾಡಿ ತರುವ ಹಣದಿಂದಲೇ ಹೊಟ್ಟೆಪಾಡು ನಡೆಯುತ್ತಿದೆ. ಇನ್ನು ಚಿಕಿತ್ಸೆಗೆ ಹಣ ಎಲ್ಲಿಂದ ತರುವುದು? ಇನ್ನಾದರೂ ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಸಣ್ಣಯ್ಯರವರ ಸಹಾಯಕ್ಕೆ ಬರಬೇಕಿದೆ. ಅರಣ್ಯ ಇಲಾಖೆಯಿಂದ ಪರಿಹಾರ ಕೊಡಿಸಬೇಕು ಎಂಬುದು ಮನೆಯವರ ಅಳಲಾಗಿದೆ.