ನರಹಂತಕ ಹುಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬಲಿ
ಮೈಸೂರು, ನವೆಂಬರ್,19: ಇಬ್ಬರು ಗ್ರಾಮಸ್ಥರನ್ನು ಬಲಿತೆಗೆದುಕೊಂಡು ಗ್ರಾಮಸ್ಥರ ಪಾಲಿಗೆ ಪೆಡಂಭೂತವಾಗಿ ಕಾಡುತ್ತಿದ್ದ ನರಹಂತಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ ಡಿ ಕೋಟೆ ಬಳಿ ಗುಂಡಿಟ್ಟು ಕೊಂದಿದ್ದಾರೆ.
ಕೆಲವು ದಿನದ ಹಿಂದೆ ಹೆಡಿಯಾಲ ಗ್ರಾಮದ ಶಿವಣ್ಣ ಮತ್ತು ದೇವಮ್ಮ ಎಂಬ ಇಬ್ಬರು ಗ್ರಾಮಸ್ಥರನ್ನು ಹುಲಿ ಬಲಿತೆಗೆದುಕೊಂಡಿತ್ತು. ಇದೀಗ ಹುಲಿಯ ಸಾವಿನಿಂದ ಮೈಸೂರು ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.[ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ]
ಅರಣ್ಯದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿಯಲ್ಲಿ ಹುಲಿ ಅಡ್ಡಾಡಿರುವ ಚಿತ್ರಗಳು ಸೆರೆಯಾಗಿರುವುದನ್ನು ಕಂಡ ಹುಲಿ ಸಂರಕ್ಷಣಾ ಪ್ರಾಧಿಕಾರ ಮಂಡಳಿಯು ಹುಲಿಯ ಕಾರ್ಯಾಚರಣೆ ವೇಳೆ ಏನಾದರೂ ತೊಂದರೆಯಾದಲ್ಲಿ ಗುಂಡಿಟ್ಟು ಕೊಲ್ಲುವಂತೆ ಆದೇಶ ನೀಡಿದ್ದರು.
ಕಾರ್ಯಾಚರಣೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬಿರದಿಂದ ಗಣೇಶ್, ಪಾರ್ಥಸಾರಥಿ ಮತ್ತು ರೋಹಿತ್ ಎಂಬ ಮೂರು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದ್ದು, ಇದರ ಮೇಲೆ ಕುಳಿತು ಶಾರ್ಪ್ ಶೂಟರ್ ಗಳು ಹುಡುಕಾಟ ನಡೆಸುತ್ತಿದ್ದರು.[ನರಭಕ್ಷಕ ಹುಲಿ ಹಿಡಿಯಲು ಬಂದ ಗಣೇಶ್, ರೋಹಿತ್]
ಹುಲಿ ಹಾದು ಹೋಗಿರುವುದನ್ನು ಹುಡುಕಿ ಹೊರಟ ತಂಡಕ್ಕೆ ಕೆಲ್ಸಿ ಕಲ್ಲಾರ ಬಳಿ ಕಾಣಲು ಸಿಕ್ಕಿದ್ದು, ಅಲ್ಲಿಂದ ಅರಣ್ಯದ ಕಡೆ ಓಡಿ ಹೋಗಿತ್ತು. ಅರಣ್ಯದ ಅಂಚಿನಲ್ಲೇ ಅಡ್ಡಾಡುತ್ತಿರುವ ಹುಲಿಯನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರಾದರೂ ಅಪಾಯ ಎದುರಾದಾಗ ಗುಂಡಿಟ್ಟು ಕೊಂದಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.