ಹಕ್ಕಿಜ್ವರ ಹರಡಲು ಬಿಡದಿರಿ, ಮೈಸೂರು ಡಿಸಿ
ಮೈಸೂರು, ಜನವರಿ 13: ಹಕ್ಕಿಜ್ವರದಿಂದ ಮೈಸೂರು ಮೃಗಾಲಯಕ್ಕೆ ಒಂದು ತಿಂಗಳಕಾಲ ರಜೆ ಘೋಷಿಸಿರುವ ಹಿನ್ನೆಲೆ ಮೈಸೂರು ಜಿಲ್ಲೆಯ ಇತರೆಡೆ ಹಕ್ಕಿಜ್ವರ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದ್ದಾರೆ.
ಮೃಗಾಲಯದ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯ 68 ಹಳ್ಳಿಗಳಲ್ಲಿ ಸೂಕ್ತ ಕಣ್ಗಾವಲಿಡುವಂತೆಯೂ ಹಾಗೂ ಪಕ್ಷಿಗಳ ರಕ್ತ ಹಾಗೂ ಹಿಕ್ಕೆ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸುವಂತೆ ಮತ್ತು ಕುಕ್ಕುಟಗಳ ಅಸ್ವಾಭಾವಿಕ ಸಾವು ಕಂಡು ಬಂದಲ್ಲಿ ಕೂಡಲೇ ವರದಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತುರ್ತು ಸಭೆಯಲ್ಲಿ ತಿಳಿಸಿದರು.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]
ಖಾಸಗಿ ಕೋಳಿ ಫಾರಂ ಮಾಲೀಕರು ಕೋಳಿಗಳಲ್ಲಿ ಅಸ್ವಾಭಾವಿಕ ಸಾವು ಕಂಡುಬಂದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ಗಮನಕ್ಕೆ ತರಬೇಕೆಂದು ತಿಳಿಸಿದರು. ಸದರಿ ರೋಗ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆಯಿಂದ ಹರಡುವುದಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ ಸಾರ್ವಜನಿಕರು ಮೃತಪಟ್ಟ ಹಕ್ಕಿಗಳು ಕಂಡುಬಂದಲ್ಲಿ ಅವುಗಳನ್ನು ಹೂಳದೇ ಹತ್ತಿರದ ಪಶುವೈದ್ಯ ಸಂಸ್ಥೆಗೆ ತಲುಪಿಸಲು ಸೂಚಿಸಿದರು.[ಮೈಸೂರು ಮೃಗಾಲಯ ಪರಿಶೀಲಿಸಿದ ಅರಣ್ಯ ಸಚಿವ ರಮಾನಾಥ ರೈ]
ಮೈಸೂರು ಜಿಲ್ಲೆಯಲ್ಲಿ 755 ಕೋಳಿ ಫಾರಂಗಳಿದ್ದು, ಹಿತ್ತಲ ಕೋಳಿಯೂ ಸೇರಿ ಒಟ್ಟಾರೆ 75,98,000 ಕೋಳಿಗಳಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟು 39 ಆರ್.ಆರ್.ಟಿ. ತಂಡಗಳನ್ನು ರಚಿಸಲಾಗಿದ್ದು, ಅಗತ್ಯ ಕೋಳಿ ಶೀತಜ್ವರ ಪರಿಕರಗಳನ್ನು ದಾಸ್ತಾನಿನಲ್ಲಿಡಲಾಗಿರುತ್ತದೆ ಎಂದು ತಿಳಿಸಿದರು. ಜಿಲ್ಲೆಯ ಖಾಸಗಿ ಕೋಳಿ ಫಾರಂಗಳ ಮಾಲೀಕರ ಸಭೆ ನಡೆಸಿ ಸೂಕ್ತ ಜೈವಿಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ. ಜಿಲ್ಲಾದ್ಯಂತ ಒಟ್ಟು 551 ಹಿಕ್ಕೆ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಪ್ರಸಾದ್ ಮೂರ್ತಿ ಮಾಹಿತಿ ನೀಡಿದರು.[125 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಝೂ ಕ್ಲೋಸ್..!]
ಮೃಗಾಲಯದಲ್ಲಿ 7 ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಇವುಗಳಲ್ಲಿ 4 ಪಕ್ಷಿಗಳು ಹಕ್ಕಿಜ್ವರದಿಂದ ಮೃತಪಟ್ಟಿರುವುದಾಗಿ ಭೂಪಾಲಿನ ಪ್ರಯೋಗಾಲಯದಿಂದ ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆಯ ಹಿರಿಯ ಅಧಿಕಾರಿಗಳು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂಜಾಗ್ರತೆಗೆ ಸೂಚಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಕಮಲ ಕರಿಕಾಳನ್ ತಿಳಿಸಿದರು.
ಮೃಗಾಲಯದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಮೃಗಾಲಯದ ಎಲ್ಲಾ ಸಿಬ್ಬಂದಿಗಳಿಗೆ ಅಗತ್ಯ ತಿಳಿವಳಿಕೆ ನೀಡಲಾಗಿದೆ. ಸಿಬ್ಬಂದಿಗಳಿಗೆ ಟ್ಯಾಮಿಫ್ಲ್ಯೂ ಮಾತ್ರೆಗಳನ್ನು ನೀಡಲಾಗಿತ್ತಿದೆ. ಸಾರ್ವಜನಿಕರಲ್ಲಿ ಜ್ವರ, ನೆಗಡಿ, ಶೀತಬಾದೆ ಕಂಡುಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸುವುದು. ಅಗತ್ಯ ಪ್ರಮಾಣದಲ್ಲಿ ಟ್ಯಾಮಿಫ್ಲ್ಯೂ ಮಾತ್ರೆಗಳನ್ನು ದಾಸ್ತಾನಿನಲ್ಲಿ ಇಡಲಾಗಿದೆ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಹಕ್ಕಿಜ್ವರಕ್ಕೆ ವಿಶೇಷವಾಗಿ ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜು ತಿಳಿಸಿದರು.