ದುರಾಸೆಯಿಂದ ದರೋಡೆ ಮಾಡಿದ್ದ ಮೈಸೂರು ಹುಡುಗರು ಈಗ ಎಲ್ಲಿದಾರೆ?
ಮೈಸೂರಿನ ಈ ಹುಡುಗರಿಗೆ ಅದ್ಯಾಕೆ ಇಂಥ ದುರ್ಬುದ್ಧಿ ಬಂತೋ! ಅದರಲ್ಲೂ ಮುಖ್ಯ ಆರೋಪಿ ಸನತ್ ಪಿಯುಸಿಯಲ್ಲಿ 590 ಅಂಕ ಪಡೆದಿದ್ದಾನೆ. ಈಗ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ಈ ಹುಡುಗರು ಮಾಡಿದ್ದೇನು ಅಂತ ತಿಳಿಯೋದಿಕ್ಕೆ ವರದಿ ಓದಿ
ಮೈಸೂರು, ಫೆಬ್ರವರಿ 23: ದುಬಾರಿ ಹೆಡ್ ಫೋನ್ ನ ಆಸೆಗಾಗಿ ಸಂಚು ರೂಪಿಸಿದ ಮೈಸೂರಿನ ಕಾಲೇಜು ಹುಡುಗರು ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಈ ಪ್ರಕರಣದ ರೂವಾರಿ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದ ವಿದ್ಯಾರ್ಥಿ ಎಂಬುದು ವಿಪರ್ಯಾಸವಾಗಿದೆ.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸನತ್, ವಿದ್ಯಾ ವಿಕಾಸ್ ಕಾಲೇಜಿನ ಒ.ಎಸ್.ಖಾನ್, ಲಷ್ಕರ್ ಮೊಹಲ್ಲಾದ ಇಸ್ಮಾಯಿಲ್ ಖಾನ್, ಸೈಯದ್ ಸೈಫ್ ಹಾಗೂ ಮತ್ತೊಬ್ಬ ಬಾಲಾಪರಾಧಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ಭೀಕರ ಅಪಘಾತ: ಮೈಸೂರು ಲೋಕಾಯುಕ್ತ ಎಸ್ಪಿ ರವಿಕುಮಾರ್ ನಿಧನ]
ಸನತ್ ಎಂಬಾತ ಕಳೆದ ತಿಂಗಳು ಅಮೆಜಾನ್ ನಲ್ಲಿ ಇಪ್ಪತ್ತು ಸಾವಿರದ ಹೆಡ್ ಫೋನ್ ಆರ್ಡರ್ ಮಾಡಿದ್ದ. ಅದನ್ನು ತಲುಪಿಸಲು ಬಂದ ವ್ಯಕ್ತಿಯನ್ನು ನಿರ್ಜನ ಪ್ರದೇಶಕ್ಕೆ ಬರಮಾಡಿಕೊಂಡು, ಕಣ್ಣಿಗೆ ಖಾರದ ಪುಡಿ ಎರಚಿ, ಹೆಡ್ ಫೋನ್ ಕಸಿದು ಆರೋಪಿಗಳು ಪರಾರಿಯಾಗಿದ್ದರು.
ಜನವರಿ 15ರಂದು ಪ್ರಕರಣ ದಾಖಲಾಗಿತ್ತು. ಇನ್ ಸ್ಪೆಕ್ಟರ್ ಜಗದೀಶ್ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನನ್ನು ಬಾಲಮಂದಿರದ ವಶಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಹೆಡ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]
ಆರೋಪಿಗಳ ಪೈಕಿ ಸನತ್ ಎಂಬಾತ ಪಿಯುಸಿಯಲ್ಲಿ 590 ಅಂಕಗಳನ್ನು ಪಡೆದು, ತೇರ್ಗಡೆಯಾಗಿದ್ದ. ಆದರೆ ಹೆಡ್ ಫೋನ್ ಆಸೆಗೆ ಇಂಥ ಕೃತ್ಯ ಎಸಗಿ, ಸಿಕ್ಕಿಬಿದ್ದಿದ್ದಾನೆ.