ಮೈಸೂರಿನಲ್ಲಿ ಪೊಲೀಸರಿಗೆ ಪ್ರಥಮ ಚಿಕಿತ್ಸೆಯ ಪಾಠ
ಮೈಸೂರು, ಆಗಸ್ಟ್ 7: ಅಪಘಾತಗಳು ನಡೆದಾಗ ನಮಗೆ ಮೊದಲಿಗೆ ನೆನಪಿಗೆ ಬರುವುದು ಪೊಲೀಸ್. ತಕ್ಷಣ ಅವರಿಗೆ ಮಾಹಿತಿ ನೀಡುತ್ತೇವೆ. ನಂತರ ಆಂಬ್ಯುಲೆನ್ಸ್ ತರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತದೆ.
ಆದರೆ ಪ್ರಥಮ ಬಾರಿಗೆ ಎಂಬಂತೆ ಮೈಸೂರಿನಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಪೊಲೀಸರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಿ ಅವರ ಮೂಲಕ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಸಾವಿನ ದವಡೆಯಿಂದ ರಕ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಕಾರ್ಯ ಮುಂದಿನ ದಿನಗಳಲ್ಲಿ ಅವಘಡದ ಸಂದರ್ಭ ಗಾಯಾಳುವಿನ ಪ್ರಾಣ ರಕ್ಷಣೆಗೆ ನೆರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ನಮ್ಮ ವ್ಯವಸ್ಥೆಯಲ್ಲಿ ಅಪಘಾತ ಅಥವಾ ಇನ್ನಿತರ ದುರಂತದ ಸಂದರ್ಭಗಳಲ್ಲಿ ಸ್ಥಳಕ್ಕೆ ತುರ್ತು ವಾಹನ ತರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆಯೇ ವಿನಃ ಸ್ಥಳಕ್ಕೆ ವೈದ್ಯರನ್ನು ಅಥವಾ ವೈದ್ಯಕೀಯ ಸಿಬ್ಬಂದಿಯನ್ನು ಕರೆಯಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಸಾಗಿಸುವಂತಹ ವ್ಯವಸ್ಥೆಯೇ ಇಲ್ಲ.
ಬಿಗ್ ಬಾಸ್ ಗೆ ಹೊರಟಿದ್ದ ನಕಲಿ ಪೊಲೀಸನ ಅಸಲಿ ಮುಖ ಇದು!
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ವಿಚಾರ ಏನೆಂದರೆ ಯಾವುದೇ ಘಟನೆ ನಡೆದ ಸಂದರ್ಭದಲ್ಲಿ ತಕ್ಷಣಕ್ಕೆ ಸ್ಥಳಕ್ಕೆ ಹಾಜರಾಗುವುದು ಪೊಲೀಸರೇ. ಅವರೇ ಮುಂದೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡಬೇಕು. ಸಾರ್ವಜನಿಕರು ಕೆಲವೊಮ್ಮೆ ಸ್ಥಳದಲ್ಲಿದ್ದರೂ ಪೊಲೀಸರು ಬಾರದಿದ್ದರೆ ಅವರ್ಯಾರು ಯಾವುದೇ ಕ್ರಮಕ್ಕೂ ಮುಂದಾಗದೆ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಾರೆ. ಈಗಾಗಲೇ ನೋಡಿದ ಬಹಳಷ್ಟು ಘಟನೆಗಳು ನಮ್ಮ ಮುಂದೆ ಸಾಕ್ಷಿಯಾಗಿವೆ.
ಸಾಮಾನ್ಯವಾಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದರೂ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನಷ್ಟೆ ಮಾಡಬಹುದು ಮತ್ತು ಮಾಡುತ್ತಾರೆ. ಈ ವೇಳೆ ಗಾಯಾಳು ಆಸ್ಪತ್ರೆಗೆ ತಲುಪುವ ಮುನ್ನವೇ ದಾರಿ ಮಧ್ಯೆ ಅಥವಾ ಆಸ್ಪತ್ರೆಯಲ್ಲಿ ಮೃತಪಡಬಹುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆಯೂ ನಮ್ಮನ್ನು ಕಾಡದಿರದು. ಈ ಕುರಿತಂತೆ ವೈದ್ಯರು ಹೇಳುವುದೇನೆಂದರೆ ಘಟನಾ ಸಂದರ್ಭ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯಾದರೆ ಒಂದು ವೇಳೆ ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ. ಆದರೆ ಪ್ರಥಮ ಚಿಕಿತ್ಸೆ ನೀಡುವವರು ಯಾರು ಎಂಬ ಪ್ರಶ್ನೆಯೂ ಮೂಡುತ್ತದೆ. ನಮಗೆ ಗೊತ್ತಿರುವಂತೆ ಅಂತಹ ಸಂದರ್ಭದಲ್ಲಿ ಪೊಲೀಸರೇ ಸ್ಥಳಕ್ಕೆ ಬರುವುದು. ಹೀಗಾಗಿ ಅವರೇ ಪ್ರಥಮ ಚಿಕಿತ್ಸೆ ನೀಡಿದರೆ ಗಾಯಾಳುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್, ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಮ್ ವಿ ಅಮಟೆರವರ ನಿರ್ದೇಶನದಂತೆ ಮೈಸೂರು ನಗರದ ಶಾಂತವೇರಿ ಗೋಪಾಲಗೌಡ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗಾಯಾಳುಗಳಿಗೆ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡ ಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಗಿದೆ. ಈ ತರಬೇತಿ ಈಗಾಗಲೇ ಬೇರೆ, ಬೇರೆ ದಿನಗಳಲ್ಲಿ ಒಟ್ಟಾರೆ ಮೂರು ದಿನಗಳ ಕಾಲ ನಡೆದಿದ್ದು, ಒಟ್ಟು 250 ಮಂದಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ತರಬೇತಿಯ ಅವಧಿಯಲ್ಲಿ ಗಾಯಾಳುವಿನ ಪರಿಸ್ಥಿತಿಯನ್ನು ಅರಿತು ಮಾಡಬಹುದಾದ ಪ್ರಥಮ ಚಿಕಿತ್ಸೆ ಕುರಿತು ತರಬೇತಿಯನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪೊಲೀಸರಿಗೆ ಹೇಳಿಕೊಟ್ಟಿದ್ದಾರೆ. ಇದನ್ನೆಲ್ಲ ಚಾಚೂ ತಪ್ಪದೆ ಕಲಿತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಿನ ದಿನಗಳಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವಲ್ಲಿ ಸಫಲರಾಗಲಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಪ್ರಥಮ ಚಿಕಿತ್ಸೆ ಕುರಿತ ತರಬೇತಿಯು ಸಂಚಾರ ಪೊಲೀಸರು ಇನ್ನು ಹೆಚ್ಚಾಗಿ ಮತ್ತು ಪರಿಣಾಮಕಾರಿಯಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.