ಮೈಸೂರು: 2 ದಶಕದ ಬಳಿಕ ಮರಳಿ ಹಿಂದೂ ಮತ ಸೇರಿದ ತಂದೆ –ಮಗ
ಮೈಸೂರು, ಆಗಸ್ಟ್ 22 : ಇಸ್ಲಾಂ ಮತದಲ್ಲಿದ್ದ ತಂದೆ -ಮಗ ಇಂದು ಮರಳಿ ತಮ್ಮ ಹಿಂದೂ ಮತಕ್ಕೆ ಸೇರಿಕೊಂಡಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಇಸ್ಲಾಂ ಧರ್ಮದಲ್ಲಿದ್ದ ಅಪ್ಪ ಮಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮರಳಿ ಮಾತೃ ಧರ್ಮ ಸೇರಿದ್ದಾರೆ.
ತ್ರಿವಳಿ ತಲಾಖ್ ತೀರ್ಪು ಸ್ವಾಗತಾರ್ಹ : ಪ್ರಮೋದ್ ಮುತಾಲಿಕ್
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನವರಾದ ಸೈಯದ್ ಅಬ್ಬಾಸ್ ಮತ್ತು ಸೈಯದ್ ಅತೀಕ್ ಇಸ್ಲಾಂ ಧರ್ಮ ತೊರೆದು ಮತ್ತೆ ಹಿಂದೂ ಧರ್ಮ ಸೇರ್ಪಡೆಗೊಂಡವರು. ಇವರು 20 ವರುಷಗಳ ಹಿಂದೆ ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸೇರಿದ್ದರು. ಇದೀಗ ಪುನಃ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರ ಮೂಲ ಹೆಸರು ಶೇಷಾದ್ರಿ ಮತ್ತು ಹರ್ಷಿಲ್ ಆರ್ಯ. ಮಂಗಳವಾರ ನಗರದ ಆರ್ಯ ಸಮಾಜದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಧರ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಇವರು ಹಿಂದೂ ಧರ್ಮ ಸೇರಿದರು
ಇವರ ನಿಲುವು ಸ್ವಾಗತಾರ್ಹ : ಮುತಾಲಿಕ್
ಅಪ್ಪ ಮಗ ಪುನಃ ಮರಳಿ ಮಾತೃ ಧರ್ಮ ಸೇರ್ಪಡೆಗೊಂಡಿರುವ ಬಗ್ಗೆ ಮಾತನಾಡಿದ ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, "ಮದುವೆ ಸಂದರ್ಭದಲ್ಲಿ ಬಲವಂತದಿಂದ ಇಸ್ಲಾಂ ಧರ್ಮ ಮತಾಂತರ ಆಗಿದ್ದವರು ಈವತ್ತು ಸ್ವ ಇಚ್ಛೆಯಿಂದ ಹಿಂದೂ ಧರ್ಮ ಸೇರಿದ್ದಾರೆ. ದೇಶದಲ್ಲಿರುವ ಬಹುತೇಕ ಮುಸ್ಲಿಮರು ಮೂಲದಲ್ಲಿ ಹಿಂದುಗಳೇ ಆಗಿದ್ದರು. ಇವರು ಯಾರೂ ಬೇರೆ ದೇಶಗಳಿಂದ ಬಂದವರಲ್ಲ. ಮೊಘಲ್ ಆಕ್ರಮಣಕಾರರಿಂದಾಗಿ ಈಗ ಇಸ್ಲಾಂ ಧರ್ಮದಲ್ಲಿದ್ದಾರೆ" ಎಂದು ಹೇಳಿದರು.