ಮೈಸೂರಿನಲ್ಲಿ 6ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ನಾಯಕರ ಪ್ರತಿಭಟನೆ
ಮೈಸೂರು, ಜುಲೈ 29 : ಹಾರಂಗಿ ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಹಾಗೂ ಬೆಳೆ ನಷ್ಟವಾದ ರೈತರಿಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಶಾಸಕ, ಜೆಡಿಎಸ್ ನ ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರಿದಿದ್ದು, ಅರೆ ಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಾಲೆ ನೀರು ಕುಡಿಯೋಕೆ ಆಗುತ್ತೇನ್ರಿ? ಸಿದ್ದು ಖಡಕ್ ಪ್ರಶ್ನೆ
ಕಾಡಾ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶ್ರೀರಂಗಪಟ್ಟಣ ರೈತ ಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಬೆಂಬಲಿಗರು ಭಾಗವಹಿಸಿ ಬೆಂಬಲ ಸೂಚಿಸಿದರು. ಇದೇ ವೇಳೆ ಮಾತನಾಡಿದ ಸಾ. ರಾ. ಮಹೇಶ್, ಜು.30ರಂದು ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಹುಣಸೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ವಿಧಾನಸೌಧದ ಎದುರು ನೀರಿನ ಸಮಸ್ಯೆಯನ್ನು ಬಗೆಹರಿಸುವವರೆಗೆ ವಾಸ್ತವ್ಯ ಹೂಡಿ ಪ್ರತಿಭಟನೆ ನಡೆಸಲಾಗುವುದು.
ಸರ್ಕಾರ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿ ನೀಡುವ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕು. ತಮಿಳುನಾಡಿಗೆ ನೀರು ಹರಿಸುತ್ತಿ ರುವುದು ಬೇಜವಾಬ್ದಾರಿ ವರ್ತನೆಯಾಗಿದ್ದು, ಮೋಡ ಬಿತ್ತನೆ ಕಾರ್ಯವು ದುಡ್ಡು ವಸೂಲಿ ದಂಧೆಯಾಗಿದೆ. ಸೋಮವಾರ ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ರೈತರಿಗೆ ಕಾಡಾ ಆವರಣದಲ್ಲೇ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾಂಬರ್ ತಯಾರಿಸಿ ಪ್ರತಿಭಟನಾಕಾರರಿಗೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿಭಟನಾಕಾರರು ತಮಟೆ ಬಡಿಯುತ್ತ ಅನೇಕ ರೈತಗೀತೆ, ಕಾವೇರಿ ನದಿಗೆ ಸಂಬಂಧಿಸಿದ ಗೀತೆಗಳನ್ನು ಹಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.