ವಿದ್ಯುತ್ ಕತ್ತರಿಸಿದ ಅಧಿಕಾರಿಯೆದುರೇ ವಿಷ ಕುಡಿದ ರೈತ
ಎಚ್.ಡಿ.ಕೋಟೆ, ಮೇ 28 : ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಇಲಾಖೆಯವರು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ರೈತನೊಬ್ಬ ಚೆಸ್ಕಾಂ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಹಂಪಾಪುರ ಉಪ ವಿಭಾಗದ ವ್ಯಾಪ್ತಿಗೆ ಸೇರಿದ ಚಿಕ್ಕನಂದಿ ಗ್ರಾಮದ ರೈತ ಉಮೇಶ್ ತಮ್ಮ ಜಮೀನಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಕಬ್ಬು ಮತ್ತು ತರಕಾರಿ ಬೆಳೆಯನ್ನು ಬೆಳೆದಿದ್ದು ಕಳೆದ ನಾಲ್ಕು ದಿನದ ಹಿಂದೆ ಇಲಾಖೆಯವರು ವಿದ್ಯುತ್ ಕಡಿತಗೊಳಿಸಿದ್ದಾರೆ.
ರೈತ ಉಮೇಶ ಇತರೆ ರೈತರೊಡಗೂಡಿ ಹಂಪಾಪುರ ಚೆಸ್ಕಾಂ ಕಚೆರಿಗೆ ತೆರಳಿ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕ ನೀಡಿ ಸಕ್ರಮ ಗೊಳಿಸಲು ಕಾಲಾವಕಾಶ ಕೋರಿದ್ದಾರೆ. ಇಲಾಖಾ ಅಧಿಕಾರಿ ಕಾರ್ಯಪಾಲಕ ಅಭಿಯಂತರರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ.
ಹಾಗಾಗಿ ರೈತ ಉಮೇಶ ಮತ್ತು ಇತರರು ಪಟ್ಟಣದ ಚೆಸ್ಕಾಂ ಕಚೇರಿಗೆ ಬಂದು ಎಇಇ ಅವರಲ್ಲಿ ಸಂಪರ್ಕ ಕೊಡಿಸುವಂತೆ ಕೇಳಿದ ಸಂದರ್ಭದಲ್ಲಿ, ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಧಿಕಾರಿಯು ಗಲಾಟೆಗೆ ಸಂಬಂಧಿಸಿದಂತೆ ದೂರವಾಣಿ ಕರೆ ಮಾಡಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಇದರಿಂದ ರೈತ ಉಮೇಶ ವಿಚಲಿತನಾಗಿ ಟೋಮ್ಯಾಟೊ ಬೆಳೆಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕವನ್ನು ಕುಡಿಯಲು ಯತ್ನಿಸಿದ್ದಾನೆ. ಆಗ ಜೊತೆಯಲ್ಲಿದ್ದ ರೈತರು ತಡೆದು ತಕ್ಷಣ ಸಾರ್ವಜನಿಕ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಚೆರಿಗೆ ಬಂದ ರೈತರು ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ನೀಡಬೇಕು ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಆಗ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಲ್ಲದೆ, ರೈತರಿಗೆ ಹೊರಗೆ ಹೋಗುವಂತೆ ತಿಳಿಸಿದೆ. ಪೊಲೀಸರು ಬರಲಿ ಎಂಬ ಉದ್ದೇಶದಿಂದ ಕಚೇರಿಗೆ ಬಾಗಿಲು ಹಾಕಿದ್ದು, ಅಷ್ಟರಲ್ಲೇ ರೈತ ಆತ್ಮಹತ್ಯೆಗೆ ಯತ್ನಿಸಿದಾಗಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರದೀಪ್ ತಿಳಿಸಿದ್ದಾರೆ.