ಮೈಸೂರು ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ
ಮೈಸೂರು, ಅಕ್ಟೋಬರ್ 13 : 'ರೈತರೇ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಮಾಡಿಕೊಂಡರೆ ನಮ್ಮ ಕುಟುಂಗಳು ಬೀದಿಗೆ ಬರುತ್ತವೆ. ಆತ್ಮಹತ್ಯೆಯಂತಹ ಆಲೋಚನೆಯಿಂದ ಹಿಂದೆ ಸರಿಯಿರಿ' ಎಂದು ಮೈಸೂರು ದಸರಾ ಉದ್ಘಾಟಿಸಿದ ಪ್ರಗತಿಪರ ರೈತ ಪುಟ್ಟಯ್ಯ ರಾಜ್ಯದ ರೈತ ಸಮುದಾಯಕ್ಕೆ ಕರೆ ನೀಡಿದರು.
ಮಂಗಳವಾರ ಬೆಳಗ್ಗೆ 11.5ರಿಂದ 11.55ರ ನಡುವಿನ ಶುಭ ಧನುರ್ ಲಗ್ನದಲ್ಲಿ 2015ನೇ ಸಾಲಿನ ಮೈಸೂರು ದಸರಾಕ್ಕೆ ರೈತ ಪುಟ್ಟಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಸಚಿವ ಉಮಾಶ್ರೀ, ಟಿ.ಬಿ.ಜಯಚಂದ್ರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ದೇವರ ಪ್ರೀತಿಗೆ ಪಾತ್ರರಾಗಬೇಕೆ? ಹಾಗಾದ್ರೆ ದಸರಾ ಪೂಜೆ ಹೀಗಿರಲಿ]
ದಸರಾ ಉದ್ಘಾಟನೆ ಮಾಡಿ ಮಾತನಾಡಿದ ಪುಟ್ಟಯ್ಯ ಅವರು, 'ಆತ್ಮಹತ್ಯೆಯಂತಹ ಆಲೋಚನೆಯಿಂದ ಹಿಂದೆ ಸರಿಯಿರಿ ಎಂದು ರೈತ ಸಮುದಾಯಕ್ಕೆ ಮನವಿ ಮಾಡಿದರು. ಈಗ ಸರ್ಕಾರ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅವುಗಳನ್ನು ಉಪಯೋಗಿಸಿಕೊಳ್ಳಿ' ಎಂದು ಸಲಹೆ ನೀಡಿದರು. [ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]
ಇತ್ತ ಅರಮನೆಯಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಳಸ ಪೂಜೆ, ಸಿಂಹಾಸನದ ಪೂಜೆಯನ್ನು ಮಾಡಿ ಖಾಸಗಿ ದರ್ಬಾರ್ ನಡೆಸಿದರು. ಈ ಮೂಲಕ ಅರಮನೆಯಲ್ಲಿಯೂ ದಸರಾಕ್ಕೆ ಚಾಲನೆ ದೊರೆಯಿತು. [ಮೈಸೂರು ದಸರಾ 2015 : ಚಿತ್ರಗಳನ್ನು ನೋಡಿ]
ದಸರಾ ಉದ್ಘಾಟಿಸಿದ ಪುಟ್ಟಯ್ಯ ಯಾರು?
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲೋನಿಯ ನಿವಾಸಿಯಾದ ರೈತ ಪುಟ್ಟಯ್ಯ ಅವರು 2015ನೇ ಸಾಲಿನ ಮೈಸೂರು ದಸರಾಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಹಿನ್ನಲೆಯಲ್ಲಿ ರೈತನಿಂದ ದಸರಾ ಉದ್ಘಾಟಿಸಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಸರ್ಕಾರ ರೈತರಿಂದ ದಸರಾ ಉದ್ಘಾಟನೆ ಮಾಡಿಸಿತು. [ಪುಟ್ಟಯ್ಯ ಪರಿಚಯ ಓದಿ]
ಶುಭ ಧನುರ್ ಲಗ್ನದಲ್ಲಿ ಚಾಲನೆ
ಮಂಗಳವಾರ ಬೆಳಗ್ಗೆ 11.5ರಿಂದ 11.55ರ ನಡುವಿನ ಶುಭ ಧನುರ್ ಲಗ್ನದಲ್ಲಿ ಮೈಸೂರು ದಸರಾಕ್ಕೆ ರೈತ ಪುಟ್ಟಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಸಚಿವ ಉಮಾಶ್ರೀ, ಟಿ.ಬಿ.ಜಯಚಂದ್ರ ಮುಂತಾದವರ ಸಮ್ಮುಖದಲ್ಲಿ ಚಾಲನೆ ನೀಡಿದರು.
'ಎರಡು ಬರಗಾಲವನ್ನು ನೋಡಿದ್ದೇನೆ'
'ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬ ಬೀದಿಗೆ ಬರುತ್ತದೆ. ನಾನು ಎರಡು ಭೀಕರ ಬರಗಾಲಗಳನ್ನು ನೋಡಿದ್ದೇನೆ. ಆದರೂ ಧೃತಿಗೆಟ್ಟಿಲ್ಲ. ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದರೆ ಸಮೃದ್ಧವಾದ ಬದುಕು ಸಾಗಿಸಬಹುದು. ದೇಶವನ್ನು ಸಾಕುವ ಶಕ್ತಿ ರೈತನಿಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ಪುಟ್ಟಯ್ಯ ಅವರು ಕರೆ ನೀಡಿದರು.
'ಸಂಪ್ರದಾಯವನ್ನು ಮರೆತಿಲ್ಲ'
'2015ನೇ ಸಾಲಿನ ದಸರಾದಲ್ಲಿ ಅದ್ಧೂರಿ, ಆಡಂಬರವಿಲ್ಲ. ಆದರೆ, ಸಂಪ್ರದಾಯಕ್ಕೇನೂ ಧಕ್ಕೆಯಿಲ್ಲ. ಸಂಪ್ರದಾಯವನ್ನು ಮರೆತಿಲ್. ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
'ಆತ್ಮಹತ್ಯೆಯೊಂದೇ ಪರಿಹಾರವಲ್ಲ'
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸರ್ಕಾರ ನಿಮ್ಮೊಂದಿಗಿದೆ ರೈತ ಸಮುದಾಯಕ್ಕೆ ಭರವಸೆ ನೀಡಿದರು. 'ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಆತ್ಮಹತ್ಯೆಗೂ ಮುನ್ನ ನಿಮ್ಮ ಕುಟುಂಬದ ಬಗ್ಗೆ ಐದು ನಿಮಿಷ ಯೋಚಿಸಿ' ಎಂದರು.