ತೆರಕಣಾಂಬಿ ಪೊಲೀಸ್ ಠಾಣೆ ಬಳಿ ವಿಷ ಸೇವಿಸಿದ್ದ ರೈತ ಸಾವು
ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತಂದಾಗ ಆತ್ಮಹತ್ಯೆಗೆ ಯತ್ನಿಸಿದ್ದ ರೈತರಾದ ನಾಗೇಶ್ ಅವರು ಸೋಮವಾರ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ
ಮೈಸೂರು, ಮಾರ್ಚ್ 28: ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿಯಲ್ಲಿ ನಿರ್ಮಾಣವಾಗುತ್ತಿರುವ ಚೆಂಡುಮಲ್ಲಿಗೆ ಸಂಸ್ಕರಣ ಘಟಕದ ಜಮೀನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದ ಸಂದರ್ಭದಲ್ಲಿ ತೆರಕಣಾಂಬಿ ಪೊಲೀಸ್ ಠಾಣೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆಗೆ ಸ್ಪಂದಿಸದೆ ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಾಗೇಶ್ ಮೃತ ದುರ್ದೈವಿ. ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಸಮೀಪ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿರುವ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮಾರ್ಚ್ 24ರಂದು ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಗೆ ನಾಗೇಶ್ ವಿರುದ್ಧ ಕಾರ್ಖಾನೆಯ ಮಾಲೀಕರು ದೂರು ನೀಡಿದ್ದರು.[ಬಜೆಟ್ ನಲ್ಲಿ ಸಾಲಮನ್ನಾ ಮಾಡದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ]
ವಿಚಾರಣೆಗೆ ನಾಗೇಶ್ ರನ್ನು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಭಯಗೊಂಡ ನಾಗೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಾರ್ಚ್ 27ರ ಸಂಜೆ ಸಾವನ್ನಪ್ಪಿದ್ದಾರೆ.
ಕಾರ್ಖಾನೆಯ ಮಾಲೀಕ, ವ್ಯವಸ್ಥಾಪಕ ಜೈನೇಂದ್ರನ್, ಸಹಾಯಕ ಸಯ್ಯದ್ ನನ್ನ ತಮ್ಮನಿಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತ ನಾಗೇಶ್ ಸಹೋದರ ಮಹೇಶ್ ಎಂಬುವರು ತೆರಕಣಾಂಬಿ ಠಾಣೆಯಲ್ಲಿ ದೂರು ನೀಡಿದ್ದಾರೆ.[ತುಮಕೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ]
ಘಟನೆ ಹಿನ್ನಲೆಯಲ್ಲಿ ಕಗ್ಗಳದಹುಂಡಿ ಸಮೀಪ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆ ವಿರುದ್ಧ ಹೋರಾಟ ನಡೆಸಿದ್ದ ರೈತಸಂಘವು ಕಾರ್ಖಾನೆ ಮಾಲೀಕರು ನಾಗೇಶ್ ಗೆ ನಿರಂತರ ಮಾನಸಿಕ ಕಿರುಕುಳ ನೀಡಿ, ಪೊಲೀಸರಿಗೆ ದೂರು ನೀಡಿದ್ದೇ ಸಾವಿಗೆ ಕಾರಣ ಎಂದು ಆರೋಪಿಸಿದ್ದು, ಕ್ರಮಕ್ಕೆ ಆಗ್ರಹಿಸಿದೆ.